ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು, ಪೋಷಕರು ತಮ್ಮ ಮಕ್ಕಳಲ್ಲಿನ ಆಸಕ್ತಿ ಅಭಿರುಚಿ ಗುರುತಿಸಿ ಪ್ರೋತ್ಸಾಹ ನೀಡಿದರೆ ಮುಂದೆ ಜೀವನದಲ್ಲಿ ಮಕ್ಕಳಿಂದ ಮಹತ್ತರ ಸಾಧನೆ ಸಾಧ್ಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಗದಗ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಜರುಗಿದ `ಪ್ರಾಚ್ಯಪ್ರಜ್ಞೆ’ ರಾಜ್ಯ ಮಟ್ಟದ ಸ್ಪರ್ಧೆ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.
ಬಾಲ್ಯದಿಂದಲೇ ಮಕ್ಕಳಿಗೆ ಶ್ರದ್ಧೆ, ಶಿಸ್ತು ಕಲಿಸಬೇಕು. ಎಲ್ಲಿ, ಹೇಗೆ ವರ್ತಿಸಬೇಕು ಎಂಬ ಕುರಿತು ತಿಳುವಳಿಕೆ ನೀಡಬೇಕು. ಅದು ಅವರ ಜೀವನದಲ್ಲಿ ಅಗಾಧ ಬದಲಾವಣೆಗೆ ಕಾರಣವಾಗಲಿದೆ. ಶಿಲ್ಪಕಲೆಗಳು ನಮ್ಮ ದೇಶದ ಪರಂಪರೆಯನ್ನು ಬಿಂಬಿಸುತ್ತವೆ. ಅವುಗಳ ಉಳಿವಿಗೆ ಸರ್ಕಾರ ಸಹ ಪ್ರಯತ್ನ ನಡೆಸಿದ್ದು, ಸಾರ್ವಜನಿಕರ ಸಹಭಾಗಿತ್ವವು ಅಷ್ಟೇ ಪ್ರಮುಖ ಎಂಬುದನ್ನು ಹೇಳಿದರು.
ಪ್ರತಿ ವರ್ಷ ನಡೆಸುವ ಈ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳಲ್ಲಿ ಒಂದಾದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಹೆಣ್ಣು ಮಗುವಿಗೆ ಪ್ರಶಸ್ತಿ ನೀಡಲು ಅವ್ವ ಟ್ರಸ್ಟ್ ವತಿಯಿಂದ 3 ಲಕ್ಷ ರೂ ಅನುದಾನ ನೀಡುತ್ತೇನೆಂದು ಬಸವರಾಜ ಹೊರಟ್ಟಿ ಘೋಷಿಸಿದರು.
ಈವರೆಗೆ ರಾಜ್ಯದಲ್ಲಿ 14450 ಗ್ರಾಮಗಳ ಸ್ಮಾರಕ ಶಿಲ್ಪಗಳ ಜಿಯೋಟ್ಯಾಗಿಂಗ್ ಮಾಡಲಾಗಿದೆ. ಈ ಕಾರ್ಯ ಶೀಘ್ರದಲ್ಲೇ ಪೂರ್ಣಮಾಡುವ ಬಗ್ಗೆ ಕೆಲಸ ನಡೆದಿದೆ. ಪೂರ್ಣವಾದರೆ ದೇಶದಲ್ಲೇ ಜಿಯೋಟ್ಯಾಗಿಂಗ್ ಮಾಡಿದ ರಾಜ್ಯ ಕರ್ನಾಟಕ ಆಗುತ್ತದೆ. ಇದು ನಮ್ಮ ಹೆಮ್ಮೆ ಎಂದರು.
ವಿವಿ ಕುಲಪತಿ ಪ್ರೊ. ಸುರೇಶ್ ನಾಡಗೌಡರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಆರ್.ಎಸ್. ಬುರಡಿ, ಡಾ. ಡಿ. ಸ್ಮಿತಾ, ಡಾ. ಆರ್. ಶೇಜೇಶ್ವರ, ಡಾ. ಸಿ.ಎನ್. ಮಂಜುಳಾ, ತಾರಕೇಶ್ ಟಿ ಹಾಜರಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಬಳ್ಳಾರಿಯ ದಿವ್ಯ ಜ್ಯೋತಿ, ಹಾಸನ ಜಿಲ್ಲೆಯಿಂದ ಆಗಮಿಸಿದ ರಮೇಶ್ ಹಾಗೂ ಪೋಷಕರು, ಶಿಕ್ಷಕರು ಅವರುಗಳು ಅನಿಸಿಕೆಗಳನ್ನು ಹಂಚಿಕೊಂಡರು.
ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೊಗೇರಿ ವಂದಿಸಿದರು.
ಬಾಕ್ಸ್
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜ್ ಎ ಮಾತನಾಡಿ, ಸಚಿವರಾದ ಎಚ್.ಕೆ. ಪಾಟೀಲರು ಪ್ರವಾಸೋದ್ಯಮ ಇಲಾಖೆ ಸಚಿವರಾದ ಮೇಲೆ ಈ ಪುರಾತತ್ವ ಇಲಾಖೆಗೆ ಹೊಸ ಚೈತನ್ಯ ನೀಡಿದ್ದಾರೆ. ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿವೆ, ಇವುಗಳನ್ನು ಕೆಲವು ಎನ್ಜಿಒಗಳು ದತ್ತು ಪಡೆದು ಅಭಿವೃದ್ಧಿ ಮಾಡಲು ಮುಂದೆ ಬಂದಿವೆ. ಅವರಿಗೆ ಧನ್ಯವಾದಗಳು ಎಂದರು.



