ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಶಿಕ್ಷಕರು ಪಾಠ ಮಾಡುವುದು ಎಷ್ಟು ಮುಖ್ಯವೋ, ವಿದ್ಯಾರ್ಥಿಗಳು ಶೃದ್ಧೆ, ಪ್ರಾಮಾಣಿಕತೆ, ದೃಢ ಸಂಕಲ್ಪ, ಏಕಾಗ್ರತೆ, ಆತ್ಮ ಸಂತೋಷದಿಂದ ಅಭ್ಯಾಸ ಮಾಡುವುದು ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆ ಬಿಟ್ಟು, ಋಣಾತ್ಮಕವಾಗಿ ಯೋಚಿಸದೇ ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸದಿಂದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು.
ಅವರು ಮಂಗಳವಾರ ರಾತ್ರಿ ಲಕ್ಮೇಶ್ವರದ ಪಿಎಸ್ಬಿಡಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆಸುತ್ತಿರುವ ಓದಿನ ಮನೆ ಕಾರ್ಯಕ್ರಮ ಪರಿಶೀಲನೆಯ ಸಂದರ್ಭದಲ್ಲಿ ಮಾತನಾಡಿದರು.
ನಿಮ್ಮ ಉಜ್ವಲ ಭವಿಷ್ಯದ ರೂವಾರಿಗಳು ನೀವೇ ಆಗಿದ್ದು, ಅನಗತ್ಯ ಯೋಚನೆಗಳಿಂದ ಹೊರ ಬಂದು ಶ್ರದ್ಧೆಯಿಂದ ಮನಸ್ಸನ್ನು ಓದಿನತ್ತ ಕೇಂದ್ರೀಕರಿಸಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗಳಿಸುವ ಯಶಸ್ಸು ಮುಂದಿನ ಶೈಕ್ಷಣಿಕ ಜೀವನಕ್ಕೆ ಮಾರ್ಗದರ್ಶಿಯಾಗಲಿದೆ. ನೀವೇ ಸಂಪತ್ತೆಂದು ತಿಳಿದಿರುವ ತಂದೆ-ತಾಯಿಗಳು ನಿಮ್ಮ ಭವಿಷ್ಯದ ಬಗ್ಗೆ ಬೆಟ್ಟದಷ್ಟು ಆಸೆ-ಕನಸು ಕಟ್ಟಿಕೊಂಡು ಹಗಲಿರುಳು ದುಡಿಯುತ್ತಾರೆ. ಅದನ್ನು ಅರ್ಥೈಸಿಕೊಂಡು ಹೆತ್ತವರ ಆಸೆ ತೀರಿಸುವ ನಿಟ್ಟಿನಲ್ಲಿ ದೃಡ ಹೆಜ್ಜೆ ಇಡಬೇಕು ಎಂದರು.
ಈ ವೇಳೆ ಬಿಆರ್ಪಿ ಈಶ್ವರ ಮೆಡ್ಲೇರಿ, ಮುಖ್ಯ ಶಿಕ್ಷಕರಾದ ಜೆ.ಡಿ. ಲಮಾಣಿ, ಫ್ರಭುಗೌಡ ಯಕ್ಕಿಕೊಪ್ಪ, ಕಾವ್ಯಾ ದೇಸಾಯಿ, ಎಸ್.ಬಿ. ಅಣ್ಣಿಗೇರಿ, ಎಸ್.ಬಿ. ಲಮಾಣಿ ಸೇರಿ ಹಲವು ಶಿಕ್ಷಕರು, ಪಾಲಕರು ಇದ್ದರು.
ಈ ವರ್ಷ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ಓದಿನಮನೆ, ಮನೆ ಮನೆ ಭೇಟಿ, ಗುಂಪು ಅಧ್ಯಯನ, ಪೋನ್-ಇನ್ ಕಾರ್ಯಕ್ರಮ, ಸಂಪನ್ಮೂಲ ಶಿಕ್ಷಕರಿಂದ ಕಾರ್ಯಾಗಾರಗಳು ಸೇರಿ ಅನೇಕ ಪೂರಕ ಮತ್ತು ಪ್ರೇರಣಾದಾಯಕ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕೈಗೊಂಡಿರುವ ಕಾರ್ಯಕ್ರಮಗಳಿಗೆ ಶಿಕ್ಷಕರು ಶಾಲಾ ಅವಧಿಯ ನಂತರವೂ ಸೇವಾ ಮನೋಭಾವದಿಂದ ಸಹಕರಿಸಿದ್ದಾರೆ. ಈ ವರ್ಷ ಉತ್ತಮ ಫಲಿತಾಂಶದ ನಿರೀಕ್ಷೆ ಮತ್ತು ಆಶಾಭಾವನೆ ಹೊಂದಿದ್ದೇವೆ.
– ಆರ್.ಎಸ್ ಬುರಡಿ.
ಡಿಡಿಪಿಐ ಗದಗ.
**ಕೋಟ್-2**
ಶಾಲಾ ಅವಧಿಯ ನಂತರ ಮನೆಯಲ್ಲಿ ಟಿವಿ, ಮೊಬೈಲ್ ನೋಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದೆವು. ಮನೆಯಲ್ಲಿ ಹಲವು ಕಾರಣಗಳಿಂದ ಓದಲು ಪೂರಕವಾದ ವಾತಾವರಣವೂ ಸಿಗುವುದಿಲ್ಲ. ಶಿಕ್ಷಕರ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಓದಿನ ಮನೆ ಕಾರ್ಯಕ್ರಮದಿಂದ ಓದುವ ಸಂದರ್ಭದಲ್ಲಿ ತಲೆದೋರುವ ಪ್ರಶ್ನೆಗಳಿಗೆ ಶಿಕ್ಷಕರು ಇಲ್ಲವೇ ಗೆಳತಿಯರಿಂದ ಉತ್ತರ ಕಂಡುಕೊಳ್ಳಬಹುದಾಗಿದೆ. ಒಬ್ಬರನ್ನು ನೋಡಿ ಒಬ್ಬರು ಓದುತ್ತೇವೆ. ಸ್ಪರ್ಧಾತ್ಮಕ, ಪ್ರೇರಣಾದಾಯಕ ಮನೋಭಾವ ಮೂಡಿ ಪರೀಕ್ಷಾ ಭಯ, ಆತಂಕ ದೂರವಾಗಲು ಓದಿನ ಮನೆ ಸಹಕಾರಿಯಾಗಿದೆ.
– ಚೈತ್ರಾ ಹೊನಕೇರಿ, ಪವಿತ್ರ ಜಗದಮನಿ,
ಲಲಿತಾ ಗವಿ-ವಿದ್ಯಾರ್ಥಿನಿಯರು.