ವಿಜಯಸಾಕ್ಷಿ ಸುದ್ದಿ, ಗದಗ: ಮೇಣದ ಬತ್ತಿ ತಾನು ಹೊತ್ತಿ ಉರಿದಾಗಲೇ ಇನ್ನೊಂದು ದೀಪವನ್ನು ಬೆಳೆಗಿಸಲು ಸಾಧ್ಯ. ದೀಪದಿಂದ ದೀಪವನ್ನು ಬೆಳಗಿಸಿ ಬೆಳಕನ್ನು ನೀಡುವಂತೆ ಅಧ್ಯಾಪಕರಾದವರು ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು ಮಕ್ಕಳಿಗೆ ಹಂಚಿದಾಗ ಅವರ ಜ್ಞಾನದ ಬೆಳಕು ವಿಸ್ತರಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಅವರು ಜ. 28 ಮತ್ತು 29ರಂದು ನಡೆಯುವ ಬೆಳಗಾವಿ, ಚಿಕ್ಕೋಡಿ, ಹಾವೇರಿ, ಧಾರವಾಡ, ಗದಗ ಜಿಲ್ಲೆಗಳ ಸರಕಾರಿ ಪದವಿಪೂರ್ವ ಕಾಲೇಜುಗಳ ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯದ ಉಪನ್ಯಾಸಕರ ಪುನಶ್ಚೇತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು (ಪದವಿಪೂರ್ವ) ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಹೊಸ ಮಾದರಿಯ ಪ್ರಶ್ನೆ ಪತ್ರಿಕೆಯ ಸ್ವರೂಪ, ನೀಲನಕ್ಷೆ ಮತ್ತು ವಿಷಯಾಧಾರಿತ ತರಬೇತಿಯನ್ನು ಹಮ್ಮಿಕೊಂಡಿದ್ದು, ಎರಡೂ ವಿಷಯಗಳ ಉಪನ್ಯಾಸಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಗದಗ ಜಿಲ್ಲಾ ಉಪನಿರ್ದೇಶಕ ಸಿದ್ದಲಿಂಗ ಬಂಡು, ಮಸನಾಯಕ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಎರಡು ದಿನಗಳ ಈ ಶಿಬಿರದ ಲಾಭವನ್ನು ಪಡೆದುಕೊಂಡು ಇಲಾಖೆಯ ಉದ್ದೇಶವನ್ನು ಸಾರ್ಥಕಗೊಳಿಸಬೇಕೆಂದು ಹೇಳಿದರು.
ಶಿಬಿರದ ಕುರಿತು ಜಿಲ್ಲಾ ಸಂಚಾಲಕ ಪ್ರಾ. ಎಂ.ಸಿ. ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಪ್ರೊ. ಜಿ.ಎನ್. ಕುರ್ತಕೋಟಿ, ಪ್ರಾ. ಅಶೋಕ ಅಂಗಡಿ, ಪ್ರಾ. ಬಿ.ಜಿ. ಗಿರಿತಿಮ್ಮಣ್ಣವರ ಡಾ. ಅರ್ಜುನ ಗೊಳಸಂಗಿ, ಪ್ರಾ. ಆಯ್.ಸಿ. ಹಾದಿಮನಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯಗಳ 120 ಉಪನ್ಯಾಸಕರು ಭಾಗವಹಿಸಿದ್ದರು.
ಎಚ್.ಎಂ. ದೊಡ್ಡಮನಿ ಪ್ರಾರ್ಥಿಸಿದರು. ಎಸ್.ಪಿ. ಗುಳಗಣ್ಣವರ ಸ್ವಾಗತಿಸಿದರು. ಪ್ರಾ. ಬಿ.ಬಿ. ಪಾಟೀಲ ವಂದಿಸಿದರು.
**ಬಾಕ್ಸ್**
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದುಗಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಮೂಲಿಮನಿ ಮಾತನಾಡುತ್ತ, ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠವಾಗಿದೆ. ಇಂತಹ ಪುನಶ್ಚೇತನ ಶಿಬಿರದ ಮೂಲಕ ಹೊಸ ಆಲೋಚನೆ, ಹೊಸ ದೃಷ್ಟಿಕೋನದಿಂದ ಮಕ್ಕಳಿಗೆ ಪಾಠ ಮಾಡಿ ಸುಭದ್ರ ಸಮಾಜವನ್ನು ನಿರ್ಮಿಸಬೇಕೆಂದು ಕರೆ ನೀಡಿದರು.