ವಿಜಯಸಾಕ್ಷಿ ಸುದ್ದಿ, ರೋಣ: ಗ್ರಂಥಾಲಯ ನಿರ್ಮಾಣದಿಂದ ಗ್ರಾಮದ ವಿದ್ಯಾವಂತ ಯುವ ಜನತೆಯ ಜ್ಞಾನ ವೃದ್ಧಿಯಾಗಲಿದ್ದು, ಗ್ರಂಥಾಲಯ ಕಟ್ಟಡವನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪುರಸಭೆ ಸದಸ್ಯ ಹಾಗೂ ಯುವ ಮುಖಂಡರಾದ ಸಂಗನಗೌಡ ಪಾಟೀಲ ಹೇಳಿದರು.
ಅವರು ಮಾರನಬಸರಿ ಗ್ರಾಮದಲ್ಲಿ ೨೦ ಲಕ್ಷ ರೂ ವೆಚ್ಚದ ಗ್ರಂಥಾಲಯ ಕಟ್ಟಡದ ಭೂಮಿಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಗ್ರಂಥಾಲಯದ ಅವಶ್ಯಕತೆಯಿದೆ ಎಂಬುದನ್ನು ಅರಿತು, ಗ್ರಾಮದ ವಿದ್ಯಾವಂತರ ಬೇಡಿಕೆಯೂ ಆಗಿದ್ದ ಗ್ರಂಥಾಲಯ ಕಟ್ಟಡದ ಭೂಮಿಪೂಜಾ ಕಾರ್ಯ ನಡೆಯುತ್ತಿರುವುದು ಸಂತಸ ತಂದಿದೆ. ಮುಖ್ಯವಾಗಿ ಶಾಸಕ ಜಿ.ಎಸ್. ಪಾಟೀಲರು ಗ್ರಾಮದ ಮೇಲೆ ಪ್ರೀತಿ-ವಿಶ್ವಾಸವನ್ನು ಹೊಂದಿದ್ದಾರೆ. ಈ ದಿಶೆಯಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ೭೦ ಲಕ್ಷ ರೂ ಸೇರಿದಂತೆ ಸಿದ್ದನಕೊಳ್ಳದ ಶ್ರೀಮಠದ ಅಭಿವೃದ್ಧಿಗೆ ೧೦ ಲಕ್ಷ ರೂ, ಗ್ರಾಮ ದೇವತೆಯ ಭವನಕ್ಕೆ ೩ ಲಕ್ಷ ರೂಗಳ ಅನುದಾನವನ್ನು ಒದಗಿಸಲಾಗಿದ್ದು, ಶಾಸಕರು ಶೀಘ್ರವೇ ಭೂಮಿಪೂಜಾ ಕಾರ್ಯವನ್ನು ನೆರವೇರಿಸಲಿದ್ದಾರೆ ಎಂದರು.
ಗ್ರಾ.ಪಂ ಅಧ್ಯಕ್ಷ ವೀರಣ್ಣ ಮರಡಿ ಭೂಮಿ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸಂಗನಗೌಡ ಪಾಟೀಲರನ್ನು ಸನ್ಮಾನಿಸಲಾಯಿತು.
ಶರಣಪ್ಪ ಕುರಿ, ಶಂಕ್ರಪ್ಪ ಸರ್ವಿ, ಸಂಗನಬಸ್ಸಪ್ಪ ಹಾದಿಮನಿ, ಗ್ರಾ.ಪಂ ಉಪಾಧ್ಯಕ್ಷೆ ಮಂಜುಳಾ ಮಾದರ, ಸದಸ್ಯರಾದ ಶಿವಕುಮಾರ ದಿಂಡೂರ, ಅಲ್ಲಾಸಾಬ ಮೋತೆಖಾನ್, ದಿಲ್ಶ್ಯಾದಬೇಗಂ ದೋಟಿಹಾಳ, ಹನಮವ್ವ ತಳವಾರ, ಮಹ್ಮದ ಸವಡಿ, ಅಡಿವೆಪ್ಪ ಜಿಗಳೂರ, ರಿಯಾಜ್ ಆಲೂರ, ದಸ್ತಿಗೀರಸಾಬ ದೋಟಿಹಾಳ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.