ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಪುಲಿಗೆರೆ ಉತ್ಸವದ ಕೊನೆಯ ದಿನವಾದ ಭಾನುವಾರ ಸಂಜೆ ಬೆಂಗಳೂರಿನ ರೋಹಿಣಿ ಮತ್ತು ಮೇಧಾ ಅವರ ಭರತನಾಟ್ಯ ಮತ್ತು ಕಥಕ್ ಸಂಪೂರ್ಣ ಕಾರ್ಯಕ್ರಮದ ಹೈಲೆಟ್ಸ್ ಎನಿಸಿಕೊಂಡಿತು.
ಕಥಕ್ ಮತ್ತು ಭಾರತನಾಟ್ಯದ ವೈಭವವನ್ನು ಒಗ್ಗೂಡಿಸುವ ಮನೋಹರ ನೃತ್ಯ ರಚನೆಯನ್ನು ಇಬ್ಬರು ನುರಿತ ಕಲಾವಿದೆಯರು ಸುಮಾರು ಒಂದುವರೆ ಗಂಟೆಗೂ ಅಧಿಕ ಸಮಯ ಪ್ರಸ್ತುತಪಡಿಸಿದ್ದು ಎಲ್ಲ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತಿತ್ತು.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುರುಗಳು ಸ್ಮತಿ ನಿರೂಪಮಾ ರಾಜೇಂದ್ರ ಮತ್ತು ಟಿ.ಡಿ. ರಾಜೇಂದ್ರ ಅವರ ಶಿಷ್ಯರಾಗಿ ತಮ್ಮದೇ ಆದ ಹೆಸರು ಗಳಿಸಿರುವ ಅಂತಾರಾಷ್ಟ್ರೀಯ ಮಟ್ಟದ ಕಲಾವಿದೆಯರಾದ ರೋಹಿಣಿ ಪ್ರಭಾತ್ (ಕಥಕ್) ಮತ್ತು ಮೆಧಾವಿನಿ ವರಖೇಡಿ (ಭಾರತನಾಟ್ಯಂ) ನೃತ್ಯ ಪ್ರದರ್ಶಿಸಿದರು.
ಪ್ರವೀಣ್ ಡಿ.ರಾವ್, ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತದಲ್ಲಿ ವಂದೇ ಹರಿಹರೌ–ಶಿವ-ನಾರಾಯಣರ ತತ್ವಾತ್ಮಕ ಏಕತೆಯನ್ನು ಹೊಳಪಿಸುವ ಮಂಗಳಾಚರಣ ಪ್ರದರ್ಶಿಸಿದರು. ನಂತರ ತರಳ ರನ್ನೆ–ಲಕ್ಷ್ಮಿ-ಪಾರ್ವತಿಯ ಹಾಸ್ಯಭರಿತ ಸಂಭಾಷಣೆಯ ಮೂಲಕ ಶಿವ-ವಿಷ್ಣು ಮಹಿಮೆಯನ್ನು ವ್ಯಕ್ತಪಡಿಸುವ ನೃತ್ಯವನ್ನು ಅತ್ಯಂತ ಮನಮೋಹಕವಾಗಿ ಅಭಿನಯಿಸಿ ಜನರಿಗೆ ಕಥೆ ಅರ್ಥವಾಗುವಂತೆ ಪ್ರಸ್ತುತಪಡಿಸಿದರು.
ಒಬ್ಬಳು ಬಾಲಕೃಷ್ಣನೊಂದಿಗೆ ವಾತ್ಸಲ್ಯಭಾವ, ಇನ್ನೊಬ್ಬಳು ಶೃಂಗಾರ ಭಾವದಲ್ಲಿ ಕೃಷ್ಣನನ್ನು ಆಕರ್ಷಿಸಿಸುವ ಕೃಷ್ಣ ನೀ ಬೇಗನೆ ಬಾರೋ ನೃತ್ಯ, ಜುಗಲ್ಬಂದಿ ತಿಲ್ಲಾನಾ-ತರಾನಾ ಕಥಕ್ ಮತ್ತು ಭಾರತನಾಟ್ಯದ ತಾಂತ್ರಿಕತೆಯನ್ನು ಒಗ್ಗೂಡಿಸಿ, ಶ್ರೀರಾಮನ ಭಕ್ತಿಯ ಶ್ಲೋಕಗಳ ಮೂಲಕ ಪರಮತತ್ವವನ್ನು ಪ್ರಕಟಿಸುವ ಮನೋಹರ ಸನ್ನಿವೇಶ, ಅಂತಿಮದಲ್ಲಿ ತಾನಿ ಅವರ್ತನಂ ಮೂಲಕ ಮುಕ್ತಾಯಗೊಂಡಾಗ ಇಡಿ ಸಭಾಂಗಣವೇ ಎದ್ದು ನಿಂತು ಕಲಾವಿದರ ಕಲೆಗೆ ಚಪ್ಪಾಳೆಯ ಮೂಲಕ ಮೆಚ್ಚುಗೆ ಸೂಚಿಸಿದರು.