ವಿಜಯಸಾಕ್ಷಿ ಸುದ್ದಿ, ನರೆಗಲ್ಲ: ಸಮೀಪದ ಹಾಲಕೆರೆ ಅನ್ನದಾನೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವದಲ್ಲಿ ಬೆಳ್ಳಿ ರಥೋತ್ಸವವು ಆಗಸ್ಟ್ 3, 4ರಂದು ಜರುಗಲಿದೆ. ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಜು. 23ರಂದು ಶ್ರೀ ಮುಪ್ಪಿನ ಬಸವಲಿಂಗ ಶ್ರೀಗಳು ಪುರ ಪ್ರವೇಶ ಮಾಡುವ ಮೂಲಕ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀಗಳು ಗ್ರಾಮದ ಹೊರವಲಯದಲ್ಲಿ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ವಿವಿಧ ವಾದ್ಯ ಮೇಳಗಳೊಂದಿಗೆ ಆಗಮಿಸಿ ಶ್ರೀಗಳಿಗೆ ಗೌರವ ಸಲ್ಲಿಸಿ, ಶ್ರೀಗಳನ್ನು ಸಡಗರದಿಂದ ಸ್ವಾಗತಿಸಿದರು. ಶ್ರೀಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿದರು. ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅನ್ನದಾನೇಶ್ವರ ಮಠಕ್ಕೆ ತಲುಪಿತು. ಆಗಸ್ಟ್ 3ರಂದು ಗಣಾರಾಧನೆ, 4ರಂದು ನಾಡಿನ ಸಮಸ್ತ ಮಹಿಳೆಯರಿಂದ ಎಳೆಯಲ್ಪಡುವ ಬೆಳ್ಳಿ ರಥೋತ್ಸವ ಜರುಗುವುದು.
ಪುರಪ್ರವೇಶ ಮಾಡಿದ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಶಿವಾನುಭವ ಚಿಂತನೆಗಳಿಂದ ಮನಸ್ಸಿನ ಮೈಲಿಗೆಯನ್ನು ದೂರ ಮಾಡಿಕೊಂಡು ಆತ್ಮಸ್ಥೆರ್ಯ, ಆತ್ಮವಿಶ್ವಾಸ ಬೆಳೆಸಿಕೊಂಡು, ಭಕ್ತಿಯಿಂದ ಗುರುವಿನಲ್ಲಿ ನಾವು ಏನು ಬೇಕಾದರೂ ಕೇಳಿದಾಗ ಅದು ನಮಗೆ ಫಲ ನೀಡುವುದು. ಹಾಲಕೆರೆ ಗ್ರಾಮದ ಭಕ್ತರು ನಿರಂತರವಾಗಿ ಪ್ರತಿ ವರ್ಷವೂ ತಪ್ಪದೇ ನಮ್ಮನ್ನು ಪರ ಪ್ರವೇಶ ಮಾಡಿಕೊಳ್ಳುವ ಮುಖಾಂತರ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಗಿರೀಶಗೌಡ ಮುಲ್ಕಿಪಾಟೀಲ, ವೀರಣ್ಣ ಹಳ್ಳಿ, ಅಣ್ಣಪ್ಪ ಹುಲ್ಲಣ್ಣವರ, ಬಸವರಾಜ ಹೊನ್ನವಾಡ, ಸಿದ್ದನಗೌಡರ ಇನಾಮತಿ, ಪ್ರವೀಣ ಭೈರಗೊಂಡ, ಹನುಮಪ್ಪ ತೊಂಡಿಹಾಳ, ಅಶೋಕ ಮಾಳಗೌಡರ, ಹನಮಂತರಾಯ ಹಳ್ಳಿ, ಶಿವರುದ್ರಪ್ಪ ನವಲಗುಂದ, ಶರಣಪ್ಪ ಬೆಟಗೇರಿ, ಶರಣಪ್ಪ ಪೂಜಾರ, ಬಸವರಾಜ ಮೇಟಿ, ತಿಮ್ಮರೆಡ್ಡಪ್ಪ ಹೊಸಮನಿ ಹಾಗೂ ಭಕ್ತರು ಉಪಸ್ಥಿತರಿದ್ದರು.