ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಹಾಗೂ ನಮ್ಮ ಮುಂದಿನ ಜನಾಂಗದ ನೆಮ್ಮದಿಯುತ ಬದುಕಿಗೆ ಪರಿಸರ ಮೂಲಭೂತ ಸಂಪತ್ತಾಗಿದ್ದು, ಪರಿಸರವನ್ನು ಉಳಿಸಿ-ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಸನ್ಮಾರ್ಗ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪ್ರೇಮಾನಂದ ರೋಣದ ನುಡಿದರು.
ಅವರು ಗುರುವಾರ ನಗರದ ಸ್ಟುಡೆಂಟ್ಸ್ ಎಜುಕೇಶನ್ ಸೊಸೈಟಿಯ ಸನ್ಮಾರ್ಗ ಕಾಲೇಜಿನಲ್ಲಿ ಆಯೋಜಿಸಲಾದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ದೇಹ ಪ್ರಕೃತಿಯ ಪಂಚಭೂತಗಳಿಂದ ನಿರ್ಮಾಣವಾಗಿದ್ದು, ನಿಸರ್ಗವನ್ನು ಹೊರತುಪಡಿಸಿ ಜೀವನವನ್ನು ಊಹಿಸುವುದು ಸಹ ಅಸಾಧ್ಯ. ಇತ್ತೀಚಿನ ದಿನಗಳಲ್ಲಿ ಪರಿಸರದ ಬಗೆಗಿನ ನಿಷ್ಕಾಳಜಿಯಿಂದ ಎಲ್ಲೆಡೆ ಪ್ರಕೃತಿ ವಿಕೋಪಗಳು ಉಂಟಾಗುತ್ತಿರುವುದು ಆತಂಕಕಾರಿಯಾಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡದೇ ಇದ್ದಲ್ಲಿ ವಿನಾಶ ನಿಶ್ಚಿತವಾಗಿದೆ. ಸಸಿಗಳನ್ನು ನೆಟ್ಟು ಪೋಷಿಸುವುದು ಇಂದಿನ ದಿನಮಾನದ ಅನಿವಾರ್ಯತೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ನೆರೆಹೊರೆ, ಕಾಲೇಜು ಹಾಗೂ ಮನೆಯಂಗಳದಲ್ಲಿ ಸಾಧ್ಯವಾದಷ್ಟು ಸಸಿಗಳನ್ನು ನೆಟ್ಟು ಪೋಷಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಚೇರ್ಮನ್ ಪ್ರೊ. ರಾಜೇಶ ಕುಲಕರ್ಣಿ, ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ರೋಹಿತ್ ಹಾಗೂ ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ, ಆಡಳಿತಾಧಿಕಾರಿಗಳಾದ ಎಂ.ಸಿ. ಹಿರೇಮಠ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಡಳಿತಾಧಿಕಾರಿ ಮೃತ್ಯುಂಜಯ ಹಿರೇಮಠ, ಹಿರಿಯ ಉಪನ್ಯಾಸಕ ಮುರಳೀಧರ ಸಂಕನೂರ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.