ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪರಿಸರ ರಕ್ಷಣೆ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ಒಬ್ಬೊಬ್ಬರು ಕನಿಷ್ಠ ಮೂರು ಸಸಿಗಳನ್ನು ನೆಟ್ಟು ಬೆಳೆಸಬೇಕು. ಅಂದಾಗ ಮಾತ್ರ ಪರಿಸರ ಸಮತೋಲನಕ್ಕೆ ಬರಲು ಸಾಧ್ಯ ಎಂದು ಪಿಎಸ್ಐ ಈರಪ್ಪ ರಿತ್ತಿ ಕರೆ ನೀಡಿದರು.
ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತು, ವಿಶ್ವ ಕಂಪ್ಯೂಟರ್ ಅಕಾಡೆಮಿ ಮತ್ತ ತಾಲ್ಲೂಕು ಕದಳಿ ಮಹಿಳಾ ವೇದಿಕೆಗಳ ಆಶ್ರಯದಲ್ಲಿ ಜರುಗಿದ ಪರಿಸರ ಕವಿಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ ಮಾತನಾಡಿ, ಭೂಮಿ, ವಾಯು, ಜಲ ಮೂಲಗಳು ಪರಿಸರದ ಅಂಗಗಳು. ಈಚಿನ ದಿನಗಳಲ್ಲಿ ಅವುಗಳನ್ನು ಎಗ್ಗಿಲ್ಲದೆ ಬಳಸುವ ಮೂಲಕ ಪರಿಸರಕ್ಕೆ ಧಕ್ಕೆ ತಂದಿದ್ದೇವೆ. ಇದರ ಪರಿಣಾಮ ವಾತಾವರಣದಲ್ಲಿ ಏರುಪೇರುಗಳಾಗುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮ ಬದುಕಿನ ಅಂಗವಾಗಬೇಕು ಎಂದರು.
ಕದಳಿ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ, ಹಿರಿಯ ಕವಿ ಕೊತ್ತಲ ಮಹಾದೇವಪ್ಪ ಮಾತನಾಡಿದರು. ಶ್ರೀನಿಧಿ ಸಿಳ್ಳಿನ, ಶ್ರೇಯಾ ಕಳಸಾಪುರ, ಯತ್ನಳ್ಳಿ, ಸಿ.ಜಿ. ಹಿರೇಮಠ, ಪೂರ್ಣಾಜಿ ಖರಾಟೆ, ರತ್ನಾ ಕರ್ಕಿ, ಮಹಾನಂದ ಕೊಣ್ಣೂರ, ಚಂದ್ರಶೇಖರ ವಡಕಣ್ಣವರ, ಬಿ.ಎಸ್. ಹೆಬ್ಬಾಳ, ಜಯಶ್ರೀ ಬಾಳಿಹಳ್ಳಿಮಠ, ಮೈತ್ರಾದೇವಿ ಹಿರೇಮಠ, ನಿರ್ಮಲಾ ಅರಳಿ, ಪ್ರತಿಭಾ ಸಿಳ್ಳಿನ, ವಿಜಯಲಕ್ಷ್ಮಿ ಕರ್ಕಿ, ಸೋಮಣ್ಣ ಯತ್ನಳ್ಳಿ ಪರಿಸರದ ಬಗ್ಗೆ ಕವನ ವಾಚಿಸಿದರು. ಜೆ.ಎಸ್. ರಾಮಶೆಟ್ರ ಸ್ವಾಗತಿಸಿದರು. ಬಸವರಾಜ ಸಂಗಪ್ಪಶೆಟ್ರ ನಿರೂಪಿಸಿದರು.
ಈ ಸಂದರ್ಭದಲ್ಲಿ ಎಮ್.ಕೆ. ಕಳ್ಳಿಮಠ, ಎಸ್.ಬಿ. ಕೊಣ್ಣೂರ, ವೆಂಕಟೇಶ ಮಾತಾಡೆ, ತಹಸೀಲ್ದಾರ, ಬಿಂಕದಕಟ್ಟಿ, ಡಾ.ಹೂವಿನ, ಸುಲೋಚನಾ ಜವಾಯಿ, ಗಂಗಾಧರ ಅರಳಿ, ಗೊರವರ ಸೇರಿದಂತೆ ಮತ್ತಿತರರು ಇದ್ದರು.
ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಪರಿಸರ ನಾಶದಿಂದ ವಾತಾವರಣ ವರ್ಷದಿಂದ ವರ್ಷಕ್ಕೆ ಬಿಸಿಯಾಗುತ್ತಲೇ ಇದೆ. ಸಾವಿರಾರು ಜನರು ಸಾವಿಗೀಡಾಗಿದ್ದು, ಇದಕ್ಕೆಲ್ಲ ಪರಿಸರ ನಾಶವೇ ನೇರ ಕಾರಣವಾಗಿದೆ. ಈಗಲೂ ನಾವು ಎಚ್ಚೆತ್ತುಕೊಂಡು ಪರಿಸರ ರಕ್ಷಣೆ ಮಾಡದಿದ್ದರೆ ಮತ್ತಷ್ಟು ಕೆಟ್ಟ ಪರಿಸ್ಥಿತಿ ಬಂದೊಗಲಿದೆ ಎಂದರು.


