ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ರಾಜಕೀಯ ಪಕ್ಷಗಳು ತತ್ವ ಸಿದ್ಧಾಂತವನ್ನು ಸಂಪೂರ್ಣವಾಗಿ ಮರೆತುಬಿಟ್ಟಿವೆ. ರಾಜ್ಯಕೀಯದಲ್ಲಿ ನೈತಿಕತೆ ಮಾಯವಾಗುತ್ತಿದ್ದು, ಇದು ದೇಶದ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಸಿದ್ಧಾಂತಗಳಿಗೆ ಯಾವುದೇ ಬೆಲೆ ಇಲ್ಲ ಎನ್ನಿಸುತ್ತಿದೆ. ಅಧಿಕಾರಕ್ಕಾಗಿ ಪಕ್ಷಾಂತರ ಪ್ರಕ್ರಿಯೆಯಲ್ಲಿ ಯಾವ ಪಕ್ಷವೂ ಕಡಿಮೆಯಿಲ್ಲ.
ಆಪರೇಷನ್ ಕಮಲ, ಹಸ್ತ ಎಂಬ ಹೆಸರಲ್ಲಿ ನಡೆಯುವ ರಾಜಕೀಯ ಅನೈತಿಕತೆಗೂ ಇಲ್ಲಿ ಕೊರತೆಯಿಲ್ಲ. ಇತರ ಪಕ್ಷಗಳ ಕಡೆಗೆ ಬಹಿರಂಗವಾಗಿ ಬೆರಳು ತೋರಿಸುವಾಗ ತಮ್ಮೆಡೆಗೆ ಉಳಿದ ಬೆರಳು ತೋರುತ್ತಿರುವ ಬಗ್ಗೆ ಯಾರೂ ಚಿಂತಿಸುವುದಿಲ್ಲ.
ಪ್ರತಿಯೊಂದು ಪಕ್ಷಗಳಿಗೆ ಒಂದು ತತ್ವ ಸಿದ್ಧಾಂತವೆಂಬುದು ಇರುತ್ತದೆ. ಆದರೆ ಅದನ್ನು ಗಾಳಿಗೆ ತೂರಲಾಗುತ್ತಿದೆ. ಅಧಿಕಾರ, ಹಣದ ಮುಂದೆ ಯಾವ ತತ್ವ-ಸಿದ್ಧಾಂತವು ಗಣನೆಗೆ ಬರುವುದಿಲ್ಲ. ರಾಜಕೀಯ ಪಕ್ಷಗಳು ನೈತಿಕ ರಾಜಕಾರಣದಿಂದ ದೂರ ಸರಿಯುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದನ್ನು ತಡೆಗಟ್ಟಲು ಪ್ರಜ್ಞಾವಂತ ನಾಗರಿಕರು ಮುಂದೆ ಬರಬೇಕೆಂದು ಅವರು ಮನವಿ ಮಾಡಿದ್ದಾರೆ.