ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಕ್ತ ತನ್ನ ಭಕ್ತಿಯಿಂದ ಭಗವಂತನನ್ನೂ ಸೋಲಿಸಬಲ್ಲ ಎಂದು ಹಾವೇರಿ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಸಮೀಪದ ನಿಡಗುಂದಿಯಲ್ಲಿ ನಡೆದಿರುವ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪುರಾಣ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ನಂಬಿಕೆ ಇದ್ದರೆ ಜೀವನ ಸರಳ, ಸುಸೂತ್ರವಾಗುತ್ತದೆ. ಎಲ್ಲದಕ್ಕೂ ನಂಬಿಕೆ ಮೂಲ ಕಾರಣವಾಗಿದೆ. ದಂಪತಿಗಳ ನಡುವಿನ ನಂಬುಗೆಯೇ ಅವರ ದಾಂಪತ್ಯ ಜೀವನದ ಯಶಸ್ಸಿನ ಗುಟ್ಟಾಗಿದೆ. ಇದನ್ನು ಅರಿತು ದಂಪತಿಗಳು ಪರಸ್ಪರ ನಂಬಿಕೆಯ ಮೇಲೆ ತಮ್ಮ ಜೀವನವನ್ನು ನಡೆಸಿದರೆ ಅವರ ಬಾಳು ಬಂಗಾರವಾಗುತ್ತದೆ ಎಂದು ಶ್ರೀಗಳು ಹೇಳಿದರು.
ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಮನುಷ್ಯನಿಗೆ ಅಹಂಕಾರ ಇರಬಾರದು. ಅಹಂಕಾರ ಇರುವ ಮನುಷ್ಯ ಎಂದಿಗೂ ಜೀವನದಲ್ಲಿ ಎತ್ತರಕ್ಕೆ ಏರಲಾರ. ಎಲ್ಲರೊಂದಿಗೆ ಬೆರೆತು ಬಾಳುವುದೇ ನಿಜವಾದ ಸ್ವರ್ಗ ಸುಖ. ಇದನ್ನು ತಿಳಿಸಿ ಹೇಳುವುದಕ್ಕಾಗಿಯೆ ಜಾತ್ರಾ ಮಹೋತ್ಸವದ ಸಂದರ್ಭಗಳಲ್ಲಿ ಪುರಾಣ ಪ್ರವಚನಗಳನ್ನು ಹೇಳಿಸಲಾಗುತ್ತಿದೆ ಎಂದರು.
ವೇದಿಕೆಯ ಮೇಲೆ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಪ್ರಭು ಮಾಸ್ತರ ಭೂಸನೂರಮಠ, ಗ್ರಾ.ಪಂ ಮಾಜಿ ಅಧ್ಯಕ್ಷ ಶಿವಣ್ಣ ಸೂಡಿ, ಮಲ್ಲನಗೌಡ ಪಾಟೀಲ, ಬಸವರಾಜ ಅಣಗೌಡ್ರ, ಬಸವರಾಜ ಅರಮನಿ ಮುಂತಾದವರಿದ್ದರು. ಶರಣಪ್ಪ ಅರಮನಿ ಸ್ವಾಗತಿಸಿದರು. ಶಿಕ್ಷಕ ರಮೇಶ ಉಳ್ಳಾಗಡ್ಡಿ ನಿರೂಪಿಸಿದರು.
ಯಾರಲ್ಲಿ ನಿಷ್ಕಲ್ಮಷ ಭಾವನೆ ಇರುತ್ತದೆಯೋ ಅಂತಹವರನ್ನು ಮಾತ್ರ ನಂಬಬೇಕೆಂದು ಶಾಸ್ತ್ರ ಹೇಳುತ್ತದೆ. ಭಕ್ತ ಭಗವಂತನನ್ನು ನಂಬಬೇಕು. ಅವನಲ್ಲಿ ಅಚಲ ಭಕ್ತಿಯನ್ನಿಡಬೇಕು. ಅಚಲ ಭಕ್ತಿಯು ಎಂದಿಗೂ ಸೂಕ್ತ ಫಲವನ್ನೇ ಕೊಡುತ್ತದೆ. ಜೀವನದ ಕಷ್ಟಗಳನ್ನು ಧೈರ್ಯವಾಗಿ ಎದುರಿಸಬೇಕು. ಕಷ್ಟಕ್ಕೆ ಹೆದರಿ ಬದುಕಿಗೆ ಎಂದಿಗೂ ಬೆನ್ನು ಹಾಕಬಾರದು. ಅವುಗಳನ್ನು ಎದುರಿಸಲು ನಿಮಗೆ ಪುರಾಣ, ಪ್ರವಚನಗಳು ಮಾರ್ಗದರ್ಶನ ನೀಡುತ್ತವೆ ಎಂದು ಸದಾಶಿವ ಸ್ವಾಮೀಜಿ ಹೇಳಿದರು.