ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಮಾನವರ ಕಲ್ಯಾಣವನ್ನು ತನ್ನ ಜೀವನದ ಗುರಿಯಾಗಿಸಿಕೊಂಡು ಜಗತ್ತಿನ ಎಲ್ಲ ಜೀವ ರಾಶಿಗಳು ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂಬ ಸಂದೇಶ ಸಾರಿದ ಮಹಾನ್ ಪುರುಷ ಏಸು ಕ್ರಿಸ್ತರು ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.
ಅವರು ಬುಧವಾರ ಪಟ್ಟಣದ ಮುಕ್ತಿನಗರದಲ್ಲಿರುವ ಬ್ಲೆಸಿಂಗ್ ಗಾಸ್ಪೆಲ್ ಪ್ರೇಯರ್ ಚರ್ಚ್ನಲ್ಲಿ ಕ್ರಿಸ್ಮಸ್ ಅಂಗವಾಗಿ ನಡೆದ ಏಸು ಕ್ರಿಸ್ತನ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಜಗತ್ತಿನಲ್ಲಿ ವಾಸ ಮಾಡುತ್ತಿರುವ ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವುದೇ ನಿಜವಾದ ಧರ್ಮ. ಯಾವ ಧರ್ಮವೂ ಕನಿಷ್ಠವಲ್ಲ, ಯಾವ ಧರ್ಮವೂ ಶ್ರೇಷ್ಠವಲ್ಲ. ದೇವನೊಬ್ಬ ನಾಮ ಹಲವು ಎನ್ನುವಂತೆ ಏಸುಕ್ರಿಸ್ತರು ಕೂಡಾ ದೇವರ ಅವತಾರವಾಗಿದ್ದಾರೆ ಎಂದು ಹೇಳಿದರು.
ಚರ್ಚ್ನ ಫಾದರ್ ರೆ.ಜಿ.ಎಂ. ನಾಯಕ್ ಮಾತನಾಡಿ, ಏಸುಕ್ರಿಸ್ತನ ಸಂದೇಶಗಳು ಸರ್ವರಿಗೂ ಏಳಿಗೆಯನ್ನು ಬಯಸುವದಾಗಿವೆ. ಬಡವ-ಬಲ್ಲಿದ, ಜಾತಿ-ವಿಜಾತಿ ಯಾವುದನ್ನೂ ನೋಡದೆ ಮನುಷ್ಯನನ್ನಾಗಿ ನೋಡು ಎನ್ನುವ ತತ್ವವನ್ನು ಇಡೀ ಜಗತ್ತಿಗೆ ಏಸುಕ್ರಿಸ್ತರು ತೋರಿಸಿಕೊಟ್ಟಿದ್ದಾರೆ. ಎಲ್ಲ ಧರ್ವ್ಮಗಳೂ ಒಳ್ಳೆಯದನ್ನು ಬಯಸುವಂತೆ ಹೇಳುತ್ತವೆ. ನಮ್ಮ ನೆರೆಹೊರೆಯ ಪರಸ್ಪರರನ್ನು ಪ್ರೀತಿಸದ ಹೊರತು ಮನುಕುಲದ ಉದ್ಧಾರ ಸಾಧ್ಯವಿಲ್ಲ ಎಂಬುದು ಏಸುಕ್ರಿಸ್ತನ ನುಡಿಯಾಗಿತ್ತು. ಇಂತಹ ಮಹಾತ್ಮನನ್ನು ಸ್ಮರಣೆ ಮಾಡುವ ಮೂಲಕ ಜಗತ್ತಿಗೆ ಶಾಂತಿ ಸಂದೇಶವನ್ನು ನೀಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಶೋಧಾ ನಾಯಕ್, ಪುರಸಭೆ ಸದಸ್ಯರಾದ ವಿಜಯ ಕರಡಿ, ರಾಮಪ್ಪ ಗಡದವರ, ನಾಗರಾಜ ಹಣಗಿ, ಡಿ.ಎಂ. ಪೂಜಾರ, ಶಿವಲಿಂಗ ಹೊತಗಿಮಠ, ಪ್ರೀತಂ, ಪ್ರವೀಣ ಮುಂತಾದವರಿದ್ದರು.