ಬೆಂಗಳೂರು:- ಆರ್ ಸಿಬಿಯ ಪ್ರತಿಯೊಬ್ಬ ಅಭಿಮಾನಿಯೂ ನಮಗೆ ಅಮೂಲ್ಯ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಬೆಂಗಳೂರಿನಲ್ಲಿ ನಮ್ಮ ತಂಡ ಆಗಮಿಸಿದಾಗ ಆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ತಂಡದ ಅಭಿಮಾನಿಗಳಲ್ಲಿ ಹಲವಾರು ಮಂದಿ ದಾರುಣವಾದ ಸಾವು ಕಂಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅದನ್ನು ನೋಡಿದ ಕೂಡಲೇ ನನಗೆ ಬೇಸರವಾಯಿತು. ಯಾರೇ ಆಗಲಿ ತಮ್ಮ ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡಬೇಕು. ಆರ್ ಸಿಬಿಯ ಪ್ರತಿಯೊಬ್ಬ ಅಭಿಮಾನಿಯೂ ನಮಗೆ ಅಮೂಲ್ಯ ಎಂದು ಅವರು ಹೇಳಿದ್ದಾರೆ.
ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ವರ್ಷಗಳ ಬಳಿಕ 18ನೇ ವರ್ಷಕ್ಕೆ ಐಪಿಎಲ್ ಕಪ್ ಗೆದ್ದಿದೆ. ಈ ಸಂಭ್ರಮಾಚರಣೆ ಎಲ್ಲೆಡೆ ಮನೆ ಮಾಡಿರುವಾಗಲೇ ಭಾರೀ ದುರಂತ ಸಂಭವಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವಕ್ಕೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ಕ್ರೀಡಾಂಗಣದ ಬಳಿ ಸೇರಿದ್ದರು. ಕಾಲಿಡಲು ಸ್ಥಳವಿಲ್ಲದಷ್ಟು ಜಾಗ ಬಿಡದ ಹಿನ್ನೆಲೆ ಕಾಲ್ತುಳಿತ ಸಂಭವಿಸಿ ಅಭಿಮಾನಿಗಳು ಮೃತಪಟ್ಟಿದ್ದಾರೆ.