ವಿಜಯಸಾಕ್ಷಿ ಸುದ್ದಿ, ಗದಗ: ಎನ್ಐಎಂಎ ಗದಗ ಜಿಲ್ಲಾ ಘಟಕದಿಂದ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಇದರಿಂದ ಹಲವಾರು ಜನರ ಸಾವು-ನೋವುಗಳನ್ನು ತಪ್ಪಿಸಬಹುದಾಗಿದೆ ಎಂದು ಅಂಬಿಕಾ ರಕ್ತ ಭಂಡಾರದ ಚೇರಮನ್ ಡಾ. ಅನಂತ ಶಿವಪುರ ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಗದಗ ಜಿಲ್ಲಾ ಘಟಕ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಗದಗ, ರಾಜೀವ ಗಾಂಧಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ರೋಣ, ಡಾ. ಎಸ್.ವಿ. ತೋಟಗಂಟಿಮಠ ಗ್ರೂಪ್ ಆಫ್ ಇನ್ಸಿಟ್ಯೂಟ್ ಗದಗ ಹಾಗೂ ಅಂಬಿಕಾ ರಕ್ತ ಭಂಡಾರ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕಟ್ಟಡದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಎಸ್.ಆರ್. ಹಿರೇಮಠ ರಕ್ತ ದಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಐ.ಬಿ. ಕೊಟ್ಟೂರುಶೆಟ್ಟರ್ ಮಾತನಾಡಿ, ಎಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಬೇಕು. ಇದರಿಂದ ತಮ್ಮ ಆರೋಗ್ಯ ಹಾಗೂ ಸಮಾಜ ಎರಡಕ್ಕೂ ಉಪಯುಕ್ತವಾಗುತ್ತದೆ ಎಂದು ತಿಳಿಸಿದರು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಡಾ. ಎಂ.ಡಿ. ಸಾಮುದ್ರಿ ಮಾತನಾಡಿ, ಎನ್ಐಎಂಎ ಸಂಘಟನೆ ಮಾಡುತ್ತಿರುವ ಇಂತಹ ಸಮಾಜಮುಖಿ ಕಾರ್ಯಗಳಿಗೆ ನಮ್ಮ ರೆಡ್ ಕ್ರಾಸ್ ಸಂಸ್ಥೆಯು ಸದಾ ಸಹಾಯವನ್ನು ನೀಡುತ್ತದೆ ಎಂದು ತಿಳಿಸಿದರು. ಎನ್ಐಎಂಎ ಗದಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಸರೋಜಾ ರಾಮಣ್ಣವರ ಮಾತನಾಡಿ, ಇಂದು ಹಲವಾರು ಮಹಿಳೆಯರು ರಕ್ತದಾನವನ್ನ ಮಾಡಿದ್ದು, ಮುಂದೆಯೂ ಸಹಿತ ನಮ್ಮ ಸಂಘಟನೆಗಳು ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಶಿಬಿರದಲ್ಲಿ 86 ಜನ ರಕ್ತದಾನವನ್ನು ಮಾಡಿದರು. ಡಾ. ಬಸವರಾಜ ಚನ್ನಪ್ಪಗೌಡರ ಸ್ವಾಗತಿಸಿದರು. ಡಾ. ಗಿರೀಶ ಬಡಿಗೇರ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ರಾಜೇಶ್ವರಿ ಹಿರೇಮಠ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್ಐಎಂಎ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಜಯಕುಮಾರ ಬ್ಯಾಳಿ ಮಾತನಾಡಿ, ಭಗತ್ ಸಿಂಣ್, ರಾಜಗುರು ಹಾಗೂ ಸುಖದೇವರ 94ನೇ ಬಲಿದಾನ ದಿನದ ಪ್ರಯುಕ್ತ ದೇಶದಾದ್ಯಂತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, 1.5 ಲಕ್ಷ ಬ್ಲಡ್ ಯೂನಿಟ್ಗಳನ್ನು ಸಂಗ್ರಹಿಸಿ ವಿಶ್ವದಾಖಲೆ ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಹೊಂದಲಾಗಿದೆ. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ರಕ್ತವನ್ನು ಕೃತಕವಾಗಿ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ರಕ್ತದಾನವನ್ನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.