ಸಮಾಜ ಸಂಘಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ ಸಮಾಜಕ್ಕೆ ಧರ್ಮ ಶಿಕ್ಷಣ ನೀಡುವ ಮೂಲಕ ಸಮಾಜದ ಬೆಳವಣಿಗೆಯಲ್ಲಿ ಶ್ರೀ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದ್ದು, ಅವರ ಜಯಂತ್ಯುತ್ಸವವನ್ನು ಎಲ್ಲೆಡೆ ಅದ್ದೂರಿಯಾಗಿ ಆಚರಿಸುವಂತಾಗಬೇಕು ಎಂದು ಪಟ್ಟಣದ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಅಭಿಪ್ರಾಯಪಟ್ಟರು.

Advertisement

ಅವರು ಸೋಮವಾರ ಪಟ್ಟಣದ ಶ್ರೀ ಶಂಕರಭಾರತಿ ಮಠದಲ್ಲಿ ವಿಪ್ರ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ, ವಿವಿಧ ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಮಾಜ ಹಿರಿಯರಿಗೆ ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ತಾಲೂಕಾ ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿ, ದೇಶದ ಧಾರ್ಮಿಕ ಪರಂಪರೆ, ವೇದೋಪನಿಷತ್ತುಗಳು, ಸಂಸ್ಕೃತಿ ಉಳಿವಿಗೆ ಶಂಕರಾಚಾರ್ಯರ ಕೊಡುಗೆ ಅಪಾರ. ತಮ್ಮ ಜೀವಿತದ ಅಲ್ಪ ಅವಧಿಯಲ್ಲೇ ಅಗಾಧವಾದ ಪಾಂಡಿತ್ಯವನ್ನು ಹೊಂದಿ, ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಶಂಕರಾಚಾರ್ಯರು ಹಿಂದೂ ಸಮಾಜದ ಉದ್ಧಾರಕರಾಗಿದ್ದಾರೆ. ಅವರ ಜಯಂತಿಯನ್ನು ಇಡೀ ಹಿಂದೂ ಸಮಾಜ ಆಚರಿಸಿದಾಗ ಸಾರ್ಥಕತೆ ಬರುತ್ತದೆ. ಬ್ರಾಹ್ಮಣ ಸಮಾಜದ ಮಕ್ಕಳು ಇಂದು ರಾಜ್ಯಮಟ್ಟದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ಸಾಧನೆ ಮಾಡಿರುವದು ಹೆಮ್ಮೆಯ ಸಂಗತಿಯಾಗಿದೆ. ವಿವಿಧ ಕ್ಷೇತ್ರದಲ್ಲಿ ತಮ್ಮದೇ ಹೆಸರು ಸಂಪಾದಿಸಿರುವವರು ಹಾಗೂ ಅನೇಕ ವೃತ್ತಿಗಳಲ್ಲಿ ನಿಸ್ವಾರ್ಥದಿಂದ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ಸಮಾಜದ ಹಿರಿಯರು ಸಮಾಜ ಸಂಘಟನೆಗೆ ಒತ್ತು ನೀಡಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ನಾರಾಯಣಭಟ್ ಪುರಾಣಿಕ, ಕೆ.ಎಸ್. ಕುಲಕರ್ಣಿ, ಗುರುರಾಜ ಪಾಟೀಲ ಕುಲಕರ್ಣಿ, ಶಂಕರ ಬೆಟಗೇರಿ, ದೃವ ಬೆಟಗೇರಿ, ಡಿ.ಪಿ. ಹೇಮಾದ್ರಿ, ಅರವಿಂದ್ ದೇಶಪಾಂಡೆ, ಡಾ. ಪ್ರಸನ್ನ ಕುಲಕರ್ಣಿ, ಕೃಷ್ಣಕುಮಾರ ಕುಲಕರ್ಣಿ ಸೇರಿದಂತೆ ಅನೇಕರು ಹಾಜರಿದ್ದರು.

ಶಂಕರಾಚಾರ್ಯರು ಪ್ರತಿಪಾದಿಸಿದ್ದ ಅದ್ವೈತ ಸಿದ್ಧಾಂತ ಪರಿಕಲ್ಪನೆಗಳು ಮನುಕುಲದ ಒಳಿತಿನ ಆಶಯ ಹೊಂದಿದ್ದವು. ದೇಶದಲ್ಲಿ ಶಾಂತಿ, ಸೌಹರ್ದತೆಗೆ ಧಾರ್ಮಿಕ ಚಿಂತನೆಗಳ ಅಡಿಪಾಯ ಒದಗಿಸಿದ್ದರು. ಬ್ರಾಹ್ಮಣ ಸಮಾಜದ ವತಿಯಿಂದ ವರ್ಷವಿಡೀ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಸಮಾಜದ ಸಂಘಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಗೋಪಾಲ ಪಡ್ನೀಸ್ ಮನವಿ ಮಾಡಿದರು.


Spread the love

LEAVE A REPLY

Please enter your comment!
Please enter your name here