ನಾಗಪುರ: ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಎಮರ್ಜೆನ್ಸಿ ಸಿನಿಮಾ ಜ.17ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಗನಾ ಹಲವು ವಿಶೇಷ ಶೋಗಳನ್ನು ಆಯೋಜಿಸಿ ಸೆಲೆಬ್ರಿಟಿಗಳಿಗೆ ತಮ್ಮ ಸಿನಿಮಾವನ್ನು ತೋರಿಸುತ್ತಿದ್ದಾರೆ. ಅಂತೆಯೇ ಇದೀಗ ನಾಗಪುರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದು ಈ ಪ್ರದರ್ಶನಕ್ಕೆ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಕೂಡ ಹಾಜರಿದ್ದರು.
ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, ಚಿತ್ರದ ವಿಶೇಷ ಸ್ಕ್ರೀನಿಂಗ್ನ ಕೆಲ ಚಿತ್ರಗಳನ್ನು ಶೇರ್ ಮಾಡಿದ್ದು, “ಜನವರಿ 17ರಂದು ಬಿಡುಗಡೆಯಾಗಲಿರುವ ಎಮರ್ಜೆನ್ಸಿ ಚಿತ್ರದ ಪ್ರದರ್ಶನದಲ್ಲಿ ನಿತಿನ್ ಜಿ ಅವರೊಂದಿಗೆ” ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವ ಗಡ್ಕರಿ, “ಇಂದು ನಾಗ್ಪುರದಲ್ಲಿ ಟೀಂ ಕಂಗನಾ ಮತ್ತು ಅನುಪಮ್ ಖೇರ್ ಅಭಿನಯದ ‘ಎಮರ್ಜೆನ್ಸಿ’ ಚಲನಚಿತ್ರದ ಪ್ರದರ್ಶನದಲ್ಲಿ ಭಾಗಿಯಾಗಿದ್ದೆ. ನಮ್ಮ ರಾಷ್ಟ್ರದ ಇತಿಹಾಸದ ಕರಾಳ ಅಧ್ಯಾಯವನ್ನು ಇಷ್ಟೊಂದು ಸತ್ಯಾಸತ್ಯತೆ ಮತ್ತು ಉತ್ಕೃಷ್ಟತೆಯೊಂದಿಗೆ ಪ್ರಸ್ತುತಪಡಿಸಿದ ಚಲನಚಿತ್ರ ನಿರ್ಮಾಪಕರು ಮತ್ತು ನಟರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಭಾರತದ ಇತಿಹಾಸದಲ್ಲಿನ ಮಹತ್ವದ ಅವಧಿಯೊಂದನ್ನು ಚಿತ್ರಿಸುವ ಈ ಚಿತ್ರವನ್ನು ಎಲ್ಲರೂ ನೋಡಬೇಕೆಂದು ನಾನು ಒತ್ತಾಯಿಸುತ್ತೇನೆ’ ಎಂದು ಮನವಿ ಮಾಡಿದ್ದಾರೆ.
ಈ ಕುರಿತಾಗಿ ಬರೆದುಕೊಂಡಿರುವ ಅನುಪಮ್ ಖೇರ್ ಕಂಗನಾ ಹಾಗೂ ದುಲಾರಿ ಇಬ್ಬರು ಬಹುದೊಡ್ಡ ಮಹಿಳಾ ಶಕ್ತಿಗಳು, ಕೆಲವು ದಿನಗಳ ಹಿಂದೆ, ಕಂಗನಾ ಅವರು ಇದ್ದಕ್ಕಿಂದಂತೆ ನನ್ನ ತಾಯಿಯಿಂದ ಆಶೀರ್ವಾದ ಪಡೆಯಲು ನಿರ್ಧರಿಸಿದರು.ಆಗ ಒಳ್ಳೆಯ ಬಟ್ಟೆ ಧರಿಸಲು ಸಮಯ ಸಿಗಲಿಲ್ಲ, ಇದಕ್ಕಾಗಿ ನಾನು ಅವರನ್ನು ರೇಗಿಸಿದೆ. ನನ್ನ ತಾಯಿ ಪ್ರೀತಿಯಿಂದ ಆಶೀರ್ವದಿಸುತ್ತಾ ಮನಸ್ಸು ಒಳ್ಳೆಯದಿದ್ದರೆ ಬಟ್ಟೆಗಳು ಅಷ್ಟು ಮುಖ್ಯವಾಗಲ್ಲ’ ಎಂದು ಹೇಳಿದರು. ಇನ್ನು ಮುಂದುವರೆದು ‘ಪ್ರೀತಿಯ ಕಂಗನಾ ನೀವು ಅಮ್ಮನನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಯಿತು.ನೀವಿಬ್ಬರೂ ಮಹಿಳಾ ಸಬಲೀಕರಣದ ದೊಡ್ಡ ಉದಾಹರಣೆ! ನಮ್ಮ ಎಮರ್ಜೆನ್ಸಿ ಚಿತ್ರ ದೊಡ್ಡ ಯಶಸ್ಸು ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಜೈ ಹೋ!” ಎಂದು ಅವರು ಬರೆದುಕೊಂಡಿದ್ದಾರೆ.
ಖೇರ್ ಮತ್ತು ಕಂಗನಾ ಅಭಿನಯದ ಚಿತ್ರ ‘ಎಮರ್ಜೆನ್ಸಿ’ ಜನವರಿ 17ರಂದು ರಿಲೀಸ್ ಆಗಿಲಿದೆ. 1975ರಿಂದ 1977ರವರೆಗೆ 21 ತಿಂಗಳ ಕಾಲ ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಮತ್ತು ದೇಶದಲ್ಲಿ ಅದರಿಂದಾದ ಪರಿಣಾಮಗಳ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಕಂಗನಾ ರಣಾವತ್, ಅನುಪಮ್ ಖೇರ್, ಶ್ರೇಯಸ್ ತಲ್ಪಡೆ, ಅಶೋಕ್ ಛಬ್ರಾ, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ವಿಶಾಕ್ ನಾಯರ್ ಮತ್ತು ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.