ಬಾಗಲಕೋಟೆ:– ಪರಮಾತ್ಮನಿಗೆ ಬಿಟ್ಟರೇ, ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಬಸವ ಜಯ ಮೃತ್ಯುಂಜಯ ಶ್ರೀ ಹೇಳಿದ್ದಾರೆ.
ಪೀಠದಿಂದ ಉಚ್ಚಾಟನೆ ಬಗ್ಗೆ ಮಾತನಾಡಿದ ಬಸವ ಜಯ ಮೃತ್ಯುಂಜಯ ಶ್ರೀ, ನಮ್ಮನ್ನ ಉಚ್ಚಾಟನೆ ಮಾಡೋ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ನಾನು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ. ಪೀಠಕ್ಕೂ ಟ್ರಸ್ಟ್ ಗೂ ಯಾವುದೇ ಸಂಬಂಧ ಇಲ್ಲ. ಪೀಠವನ್ನ ಯಾವುದೇ ಕಲ್ಲು ಮಣ್ಣಿನಲ್ಲಿ ಕಟ್ಟಿಲ್ಲ. ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ. ಭಕ್ತರ ತೀರ್ಮಾನವೇ ಅಂತಿಮ ತೀರ್ಮಾನ. ಸಮಾಜ ಬಾಂಧವರನ್ನ ಕೂಡಿಸುತ್ತೇನೆ. ಎಲ್ಲರೂ ಹೇಗೆ ಹೇಳ್ತಾರೆ ಹಾಗೆ ಮಾಡ್ತೇನೆ. ಸೃಷ್ಠಿಕರ್ತ ಪರಮಾತ್ಮನಿಗೆ ಬಿಟ್ಟರೇ, ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಪರಮಾತ್ಮನ ಸ್ವರೂಪಿಯಾದ ಭಕ್ತರಿಗೆ ಮಾತ್ರ ಉಚ್ಛಾಟನೆ ಅಧಿಕಾರ ಇದೆ. ನಾನು ಕೂಡಲಸಂಗಮದಲ್ಲೇ ಇರುತ್ತೇನೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿಂದಲೇ ಸಮಾಜ ಸಂಘಟನೆ ಮಾಡ್ತೇನೆ. ಕೂಡಲಸಂಗಮ & ದಾವಣಗೆರೆಯಲ್ಲಿ ಭಕ್ತರು ಕೊಟ್ಟ ಜಾಗ ಮಾತ್ರ ನನ್ನ ಹೆಸರಲ್ಲಿದೆ. ಮತ್ತೆಲ್ಲೂ ನನ್ನ ಹೆಸರಲ್ಲಿ ಜಾಗ ಇಲ್ಲ. ಒಂದು ವೇಳೆ ಜಾಗ ಮಾಡಬೇಕು ಅಂತ ಮನಸ್ಸು ಮಾಡಿದ್ರೆ, ಜಿಲ್ಲೆಗೊಂದು ಅಲ್ಲ, ಪ್ರತಿ ಗ್ರಾಮಕ್ಕೊಂದು ಮಾಡುತ್ತಿದ್ದೆ. ಇತ್ತೀಚಿನ ಎಐ ತಂತ್ರಜ್ಞಾನ ಬಳಸಿ ವಿಡಿಯೋ ಕ್ರಿಯೇಟ್ ಮಾಡಿರಬಹುದು. ಅದಕ್ಕೆ ನಾವು ಹೆದರುವುದಿಲ್ಲ, ಕುಗ್ಗುವುದಿಲ್ಲ. ಈ ಘಟನೆಯಿಂದ ನನ್ನ ಭಕ್ತರಿಗೆ ನೋವಾಗಿದೆ. ನನ್ನ ಭಕ್ತರಿಗೆ ನೋವಾಗಿದೆ ಅಂತ ನನಗೆ ನೋವಾಗಿದೆಯೇ ವಿನಃ ಉಚ್ಛಾಟನೆ ಮಾಡಿದ್ರಲಾ ಅಂತ ನಾನು ನೊಂದಿಲ್ಲ. ನಾನು ಇದೀಗ ಇನ್ನಷ್ಟು ಸ್ವತಂತ್ರನಾಗಿದ್ದೇನೆ ಎನ್ನುವ ಖುಷಿ ಇದೆ. ಪರ್ಯಾಯ ಪೀಠ ಕಟ್ಟಲ್ಲ, ಇದೇ ಪೀಠ ಇರುತ್ತೆ. ಟ್ರಸ್ಟ್ ಮಾತ್ರ ಅವರಿಗೆ ಸಂಬಂಧಿಸಿದ್ದು, ಇದೇ ಪೀಠ ಇರುತ್ತೆ. ಹೊಸ ಮಠ ಕಟ್ಟುವ ಬಗ್ಗೆ ಹಿರಿಯರ ಸಭೆ ಕರೆಯುತ್ತೇನೆ. ನಂತರ ರಾಜ್ಯ ಮಟ್ಟದ ಭಕ್ತರ ಸಭೆ ಕರೆದು, ಅವ್ರು ಏನ್ ಹೇಳ್ತಾರೆ ಅದನ್ನ ಮಾಡ್ತೇನೆ. ಭಕ್ತರ ನಿರ್ಧಾರವೇ ಅಂತಿಮ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.