ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಂವಿಧಾನವು ಒಂದು ಪುಸ್ತಕವಲ್ಲ. ಅದು ಭಾರತವನ್ನು ಮುನ್ನಡೆಸುವ ಒಂದು ಚೈತನ್ಯಶಕ್ತಿ. ಸಂವಿಧಾನದ ಮಹತ್ವ ಅರಿಯಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಅವರು 76ನೇ ಗಣರಾಜ್ಯೋತ್ಸವದ ಪ್ರಯುಕ್ತ ತಾಲೂಕಾಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ಸಹಯೋಗದಲ್ಲಿ ಲಕ್ಮೇಶ್ವರ ಉತ್ತರ ಸಿ.ಆರ್.ಸಿ ಕೇಂದ್ರದಲ್ಲಿ ಭಾರತದ ಸಂವಿಧಾನ ವಿಷಯದ ಕುರಿತು ಹಮ್ಮಿಕೊಂಡ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳೇ ಭವಿಷ್ಯದ ಪ್ರಜೆಗಳಾಗಿದ್ದು, ಪ್ರತಿಯೊಬ್ಬರ ಬದುಕಿಗೆ ಮೂಲಾಧಾರವಾದ ಸಂವಿಧಾನದ ಅಂಶಗಳನ್ನು ಶಾಲಾ ಹಂತದಲ್ಲಿಯೇ ತಿಳಿಸಿಕೊಡುವುದು ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಡಿ.ಎನ್. ದೊಡ್ಡಮನಿ ಮಾತನಾಡಿ, ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ವಿದ್ಯಾರ್ಥಿಗಳ ಬುದ್ಧಿವಂತಿಕೆಗೆ ಸಾಣೆ ಹಿಡಿದಂತೆ ಎಂದರು. ಮಾಧ್ಯಮಿಕ ನೌಕರ ಸಂಘದ ತಾಲೂಕಾಧ್ಯಕ್ಷ ಎಲ್.ಎಸ್. ಅರಳಿಹಳ್ಳಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಡಿ. ಲಮಾಣಿ ಮಾತನಾಡಿದರು.
ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕ ನುಡಿದರು. ಸರಕಾರಿ ಪ್ರೌಢಶಾಲೆ ಮಾಡಳ್ಳಿಯ ಶಿಕ್ಷಕ ಅಕ್ಬರಸಾಬ ನದಾಫ್ ರಸಪ್ರಶ್ನೆ ಸ್ಪರ್ಧೆಯ ನಿರ್ವಹಣೆ ಮಾಡಿದರು. ಸಿ.ಆರ್.ಪಿಗಳಾದ ಉಮೇಶ ನೇಕಾರ, ಸತೀಶ ಬೋಮಲೆ, ಎನ್.ಎ. ಮುಲ್ಲಾ, ಶಿಕ್ಷಕರಾದ ಎಸ್.ಬಿ. ಹೂವಿನ, ವೀರೇಶ ಕಮ್ಮಾರ, ಸಿ.ಎಫ್. ಪಾಟೀಲ, ಎನ್.ಎಸ್. ಬೀರನೂರ, ಆರ್.ಬಿ. ಅಡರಕಟ್ಟಿ ಇದ್ದರು.
ಪಟ್ಟಣ ವ್ಯಾಪ್ತಿಯ 14 ಪ್ರೌಢಶಾಲೆಗಳ ಇಬ್ಬರು ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು. ಎಸ್.ಟಿ.ಪಿ.ಎಂ.ಬಿ ಆಂಗ್ಲಮಾಧ್ಯಮ ಶಾಲೆಯ ಅರ್ಪಿತಾ ಚವಣ್ಣವರ, ಭುವನೇಶ್ವರಿ ಹೆಬ್ಬಾಳ ತಂಡ (ಪ್ರಥಮ), ದಿ ಯುನಿಕ್ ಸ್ಕೂಲ್ನ ಚಂದನಾ ಎನ್.ಕಳಸಾಪುರ, ವಿನುತಾ ವಿ.ಘೋರ್ಪಡೆ ತಂಡ (ದ್ವಿತೀಯ) ಆಕ್ಸ್ಫರ್ಡ್ ಸ್ಕೂಲ್ನ ಸಿಂಚನಾ ಕಟ್ಟೆಣ್ಣವರ, ಆಕಾಂಕ್ಷಾ ಪಾಟೀಲ (ತೃತೀಯ) ಸ್ಥಾನ ಪಡೆದರು. ಈ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು.