ಬೆಂಗಳೂರು:- ರಾಜಧಾನಿ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾರ್ಟಿ ಮಾಡಲು ಪಬ್ಗೆ ಕರೆಸಿ, ಸುಪಾರಿ ನೀಡಿ ಗೆಳೆಯನ ಸುಲಿಗೆ ಮಾಡಿಸಿರುವ ಘಟನೆಯೊಂದು ಜರುಗಿದೆ. ಸುಲಿಗೆಗೆ ಒಳಗಾದ ಯುವಕನನ್ನು ಚಂದನ್ ಎಂದು ಗುರುತಿಸಲಾಗಿದೆ. ಕಳೆದ ಮೇ 1ರಂದು ಚಂದನ್ಗೆ ಪವನ್ ಮತ್ತು ಅಚಲ್ ಎಂಬ ಸ್ನೇಹಿತರು ಕರೆ ಮಾಡಿ ಚಿಕ್ಕಜಾಲ ಬಳಿಯ ಪಬ್ಗೆ ಬರಲು ಹೇಳಿದ್ದರು. ತಡರಾತ್ರಿ ತನಕ ಅಚಲ್ ಮತ್ತು ಪವನ್, ಚಂದನ್ ಮೂವರು ಸೇರಿ ಪಾರ್ಟಿ ಮಾಡಿದ್ದರು.
ನಂತರ ಜಾಲಿ ರೈಡ್ ಹೋಗೋಣ ಎಂದು ಚಂದನ್ ಕಾರಿನಲ್ಲೇ ಏರ್ಪೋರ್ಟ್ ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರಿನಲ್ಲಿದ್ದ ಮೂವರ ಮೇಲೂ ಹಲ್ಲೆ ಮಾಡಿ ಚಂದನ್ ಬಳಿಯಿದ್ದ 3 ಲಕ್ಷ ಮೌಲ್ಯದ ಚಿನ್ನ, ನಗದು ದೋಚಿ ಎಸ್ಕೇಪ್ ಆಗಿದ್ದರು. ಈ ವೇಳೆ ಜೊತೆಗಿದ್ದ ಅಚಲ್ ಮತ್ತು ಪವನ್ ಪೊಲೀಸರಿಗೆ ದೂರು ನೀಡೋದು ಬೇಡ ಎಂದು ಚಂದನ್ ಮನವೊಲಿಸಿದ್ದರು. ಇದಾದ 1 ವಾರದ ನಂತರದ ಘಟನೆ ಬಗ್ಗೆ ಅನುಮಾನಗೊಂಡ ಚಂದನ್ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸ್ ತನಿಖೆಯಲ್ಲಿ ಜೊತೆಗಿದ್ದ ಸ್ನೇಹಿತರೇ ಸುಪಾರಿ ನೀಡಿ, ಸುಲಿಗೆ ಮಾಡಿಸಿರುವುದು ಗೊತ್ತಾಗಿದೆ. ಸದ್ಯ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.