ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮನುಷ್ಯನಿಗೆ ಕಣ್ಣು ಮಹತ್ವದ ಅಂಗವಾಗಿದ್ದು, ಅದರ ಬಗ್ಗೆ ಜಾಗೃತಿ ಅವಶ್ಯವಾಗಿದೆ. ಅನೇಕ ಕಾರಣಗಳಿಂದ ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಸಾವಿರಾರು ಜನರು ನಿರ್ಲಕ್ಷ್ಯ ಮಾಡುವದರಿಂದ ದೃಷ್ಟಿ ಕಳೆದುಕೊಳ್ಳುವಂತಾಗುತ್ತಿದೆ ಎಂದು ಹೂವಿನ ಶಿಗ್ಲಿಯ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಚೆನ್ನಮ್ಮನ ವನದಲ್ಲಿ ಮಂಗಳವಾರ ವರದಶ್ರೀ ಫೌಂಡೇಶನ್, ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ವರದಶ್ರೀ ಫೌಂಡೇಶನ್ ಸಿದ್ದ ಕಣ್ಣಿನ ಔಷಧಿ ಹನಿ ಹಾಕುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವರದಶ್ರೀ ಸಂಸ್ಥೆ ಉತ್ತಮ ಕಾರ್ಯಗಳನ್ನು ಹಲವಾರು ವರ್ಷಗಳಿಂದ ಮಾಡುತ್ತಿದ್ದು, ರಾಸಾಯನಿಕ ರಹಿತ ಸಿದ್ದ ಔಷಧಿಯು ಯಾವುದೇ ಅಡ್ಡ ಪರಿಣಾಮವೂ ಇಲ್ಲದೆ ದೃಷ್ಟಿ ದೋಷ ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಯಾವುದೇ ಶಸ್ತç ಚಿಕಿತ್ಸೆ ಇಲ್ಲದೆ ಕಣ್ಣಿನ ಕಾಯಿಲೆ ವಾಸಿ ಮಾಡುವ ಸಿದ್ದ ಕಣ್ಣಿನ ಹನಿಯು ಎಲ್ಲರಿಗೂ ವರದಾನವಾಗಿದೆ. ಕತ್ತಲೆಯ ಜೀವನಕ್ಕೆ ಬೆಳಕಿನ ಹನಿಯಾಗಿ ಈ ಔಷಧಿ ಸಾರ್ವಜನಿಕರಿಗೆ ಉಪಯುಕ್ತವಾಗಲಿ ಎಂದು ಹೇಳಿದರು.
ಆಯುರ್ವೇದ ವೈದ್ಯ ಸಿದ್ದು ಸಿರಸಂಗಿ, ವ್ಯವಸ್ಥಾಪಕರಾದ ಬಿ.ಕೆ. ನಾಗಲಾಂಬಿಕೆ, ಬಸವೇಶ ಮಹಾಂತಶೆಟ್ಟರ, ಡಾ.ಗಿರೀಶ ಮರಡ್ಡಿ, ಡಾ. ಪಿ.ಎಚ್. ಕಟಗೇರಿ, ಮಲ್ಲಿಕಾರ್ಜುನ ರಡ್ಡೇರ, ಮಹೇಶ ಲಿಂಬಯ್ಯಸ್ವಾಮಿಮಠ, ಜಯಲಕ್ಷ್ಮಿ ಗಡ್ಡದೇವರಮಠ, ಬಿ.ಕೆ ಶೋಭಾ, ಬಿ.ಕೆ ಪವಿತ್ರಾ, ಬಿ.ಕೆ ಸುಮಂಗಲಾ, ಇದ್ದರು. ಪಾರ್ವತಿ ಕಳ್ಳಿಮಠ, ಎ.ಎಂ. ಮಠದ, ಬಸವರಾಜ ಸಂಗಪ್ಪಶೆಟ್ಟರ್ ನಿರೂಪಿಸಿದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿದರು. ವರದಶ್ರೀ ಫೌಂಡೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿ, ಸಿದ್ದ ಔಷಧಿಯು ಕಣ್ಣಿಗೆ ಬರುವ ಕಾಯಿಲೆಗಳ ನಿವಾರಣೆಗೆ ಸೂಕ್ತವಾಗಿರುವುದು ಹಲವಾರು ಪ್ರಯೋಗಗಳಿಂದ ದೃಢಪಟ್ಟಿದೆ. ಸಾವಿರಾರು ಜನರು ಈ ಔಷಧಿಯಿಂದ ಪ್ರಯೋಜನ ಪಡೆದಿದ್ದು, ಜನರಿಗೆ ಇದರಿಂದ ಅನೂಕೂಲವಾಗಲಿ ಎನ್ನುವ ಉದ್ದೇಶದಿಂದ ಸಂಸ್ಥೆ ಸಾಕಷ್ಟು ಕಡಿಮೆ ದರದಲ್ಲಿ ಔಷಧಿ ನೀಡುತ್ತಿದೆ ಎಂದು ಹೇಳಿದರು.