ಚಿತ್ರದುರ್ಗ: ಏನೇ ಇದ್ದರೂ ಪಕ್ಷದ ಒಳಗಡೆ ಚೌಕಟ್ಟಿನಲ್ಲಿ ಬಗೆಹರಿಸಬೇಕು ಎಂದು ಮೈಸೂರು ಸಂಸ್ಥಾನದ ಮಹಾರಾಜರು ಹಾಗೂ ಸಂಸತ್ ಸದಸ್ಯರಾದ ಯದುವೀರ್ ಶ್ರೀಕೃಷ್ಣದತ್ತ ಒಡೆಯರ್ ಹೇಳಿದ್ದಾರೆ.
ನಗರದಲ್ಲಿ ಬಿಜೆಪಿಯಲ್ಲಿ ಬಣ ರಾಜಕೀಯದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಹೊಸದಾಗಿ ಪಕ್ಷದಲ್ಲಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಪಕ್ಷದ ಒಬ್ಬ ಕಾರ್ಯಕರ್ತರಾಗಿ ಪಕ್ಷದ ಚಟುವಟಿಕೆಯಲ್ಲಿ ನಾನು ಭಾಗಿಯಾಗುತ್ತಿದ್ದೇನೆ ಎಂದರು.
ಮೇಲ್ಮಟ್ಟದಲ್ಲಿ ನಡೆಯುವುದನ್ನು ನಾವು ಅನುಭವಿಸುತ್ತಿದ್ದೆವೆ. ಪಕ್ಷದಲ್ಲಿ ಒಗ್ಗಟ್ಟು ಪ್ರದರ್ಶನ ಆಗಬೇಕು ಎಂಬುದಿದೆ. ಏನೇ ಇದ್ದರೂ ಪಕ್ಷದ ಒಳಗಡೆ ಚೌಕಟ್ಟಿನಲ್ಲಿ ಬಗೆಹರಿಸಬೇಕು. ನಮ್ಮ ನಾಯಕರು ಏನೇ ಇದ್ದರೂ ಅದನ್ನು ಬಗೆಹರಿಸುವ ಭರವಸೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ನಲ್ಲಿ ಕುರ್ಚಿ ರಾಜಕೀಯ ನಡೆಯುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದರು ಎಲ್ಲಾ ಪಕ್ಷದಲ್ಲೂ ಇದು ನಡೆಯುತ್ತಿದೆ ಕುರ್ಚಿಗಳು ಕಡಿಮೆ ಇದಾವೆ. ಅದರೆ ಆಕಾಂಕ್ಷಿಗಳು ಜಾಸ್ತಿ. ಇದು ಎಲ್ಲಾ ಕಡೆ ನಡೆಯುತ್ತದೆ. ಯಾರಿಗೆ ಒಳ್ಳೆ ಸಾಮರ್ಥ್ಯ, ಯೋಗ್ಯತೆ ಇದೆ ಆ ಕುರ್ಚಿಗೆ ಬರುತ್ತಾರೆ ಎಂದರು.