ವಿಜಯಸಾಕ್ಷಿ ಸುದ್ದಿ, ಧಾರವಾಡ: ವಿಜ್ಞಾನ, ಕಲೆ ಮತ್ತು ವಾಣಿಜ್ಯ ಪದವಿ ಕಾರ್ಯಕ್ರಮಗಳನ್ನು ನೀಡುವ ಅನೇಕ ಪದವಿ ಕಾಲೇಜುಗಳಲ್ಲಿ ಸ್ಟಾರ್ಟ್ಅಪ್ ಇನ್ಕ್ಯೂಬೇಟರ್ಗಳನ್ನು ಸ್ಥಾಪಿಸುವ ಅಗತ್ಯವಿದೆ ಮತ್ತು ವಿದ್ಯಾರ್ಥಿಗಳಿಗೆ ಸ್ಟಾರ್ಟ್ಅಪ್ಗಳನ್ನು ಪ್ರಾರಂಭಿಸಲು ಸರಕಾರ ಸಹಾಯ ಮಾಡುತ್ತದೆ ಎಂದು ಧಾರವಾಡದ ಕೃವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ್ ಅಭಿಪ್ರಾಯಪಟ್ಟರು.
ಅವರು 5 ದಿನಗಳ ಕಾಲ ನಡೆದ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಭಾರತ ಈಗ ಉದ್ಯಮಶೀಲತೆ ಅಭಿವೃದ್ಧಿ ಕ್ಷೇತ್ರದಲ್ಲಿ ಮುನ್ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಅದ್ಭುತವಾದ ಆಲೋಚನೆಗಳನ್ನು ಹೊಂದಿದ್ದಾರೆ. ಸ್ಟಾರ್ಟಪ್ ಇನ್ಕ್ಯುಬೇಶನ್ ಸೆಂಟರ್ಗಳನ್ನು ಸ್ಥಾಪಿಸುವುದರಿಂದ ಕಲ್ಪನೆಯನ್ನು ವಾಣಿಜ್ಯ ಉತ್ಪನ್ನವಾಗಿ ಪರಿವರ್ತಿಸಲು ಅನುಕೂಲವಾಗುತ್ತದೆ. ಇದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮಾತ್ರವಲ್ಲದೆ ಸಮಾಜದ ಎಲ್ಲ ಸದಸ್ಯರಿಗೂ ಸಹಾಯ ಮಾಡುತ್ತದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಸ್ವಾಗತಿಸಿದ ಪ್ರಧಾನ ಸಂಶೋಧಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್.ಎಸ್. ಡೊಳ್ಳಿ, ಉದ್ಯಮಶೀಲತೆಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಅನೇಕ ವಿಷಯ ತಜ್ಞರು ತಮ್ಮ ಜ್ಞಾನವನ್ನು ಹಂಚಿಕೊಂಡರು.