ಬೆಂಗಳೂರು: ರಾಜ್ಯದಲ್ಲಿ ಆನ್ಲೈನ್ ಅಥವಾ ಸೈಬರ್ ವಂಚನೆ ಭಾರೀ ಪ್ರಮಾಣದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲೂ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ನಿರಂತವಾಗಿ ನಡೆಸಲಾಗುತ್ತಿದೆ. ಹೀಗಿದ್ದರೂ ಸೈಬರ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಅದರಲ್ಲೂ ಬ್ಯಾಂಕ್ ಹೆಸರಿನಲ್ಲಿ, ಟೂರಿಸಂ, ಆನ್ ಲೈನ್ ಗಿಫ್ಟ್ ಹೆಸರಿನಲ್ಲಿ ಅಮಾಯಕರನ್ನು ವಂಚನೆ ಮಾಡುತ್ತಿದ್ದಾರೆ. ಅಲ್ಲದೆ, ಪೊಲೀಸ್, ವಕೀಲ ಹಾಗೂ ಸರ್ಕಾರಿ ಅಧಿಕಾರಿಯ ಹೆಸರಿನಲ್ಲೂ ಅಮಾಯಕ ಜನರನ್ನು ಸೈಬರ್ ವಂಚಕರು ವಂಚನೆ ಮಾಡುತ್ತಿದ್ದಾರೆ.
ಇದೀಗ ನಟಿ ಶರಣ್ಯ ಶೆಟ್ಟಿ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಕಲಿ ನಂಬರ್ ತೆಗೆದುಕೊಂಡು ಅದಕ್ಕೆ ನಟಿ ಫೋಟೋ ಹಾಕಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ನಟಿ ಶರಣ್ಯ ಶೆಟ್ಟಿ ಹೆಸರು ಬಳಸಿ ವಂಚನೆ ಮಾಡುತ್ತಿದ್ದಾರೆ. ಶರಣ್ಯ ಶೆಟ್ಟಿಯ ಡಿಪಿಯನ್ನು ಫೋಟೋಗೆ ಹಾಕಿಕೊಂಡು ವಂಚನೆ ನಡೆಸಲಾಗುತ್ತಿದೆ. ಸ್ವಲ್ಪ ಹಣದ ಅವಶ್ಯಕತೆ ಇತ್ತು ಹೀಗಾಗಿ ಹಣ ಇದ್ದರೆ ಕಳಿಸಿ ಎಂದು ವಂಚಕರು ಮೆಸೇಜ್ ಕೂಡ ಮಾಡಿದ್ದಾರೆ.
ಬೇರೆ ನಕಲಿ ನಂಬರ್ ಪಡೆದುಕೊಂಡು ಅದರಲ್ಲಿ ಶರಣ್ಯ ಶೆಟ್ಟಿಯ ಹೆಸರು ಬರುವಂತೆ ಮಾಡಿ ಡಿ.ಪಿ ಹಾಕಿದ್ದಾರೆ . ನಂತರ ಇಂತಿಷ್ಟು ಹಣ ಬೇಕು ಎಂದು ಕೇಳಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಮ್ಮ ಅಸಲಿ ಖಾತೆಯಲ್ಲಿ ನಟಿ ಶರಣ್ಯ ಬರೆದುಕೊಂಡಿದ್ದಾರೆ. ಇದೊಂದು ನಕಲಿ ವಾಟ್ಸ್ ಆ್ಯಪ್, ಅದನ್ನು ನಂಬಿ ಯಾರು ಹಣ ಕಳಿಸಬೇಡಿ. ಅಂತಹ ಖದೀಮರ ವಿರುದ್ಧ ನಾನು ಸೈಬರ್ ಕ್ರೈಂ ನಲ್ಲಿ ದೂರು ನೀಡುತ್ತೇನೆ ಎಂದು ನಟಿ ಶರಣ್ಯ ಹೇಳಿದ್ದಾರೆ.