ಗದಗ:- ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸಿಟ್ಟಾದ ವ್ಯಕ್ತಿಯೋರ್ವನು ಮೂವರು ಕಂದಮ್ಮಗಳನ್ನು ನದಿಗೆ ಎಸೆದು ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯ ಕೊರ್ಲಹಳ್ಳಿ ಬಳಿ ಜರುಗಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿಯ ತುಂಗಭದ್ರಾ ನದಿಯಲ್ಲಿ ಮಂಗಳವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಟಿಪ್ಪರ್ ಡ್ರೈವರ್ ಆಗಿದ್ದ ಮಂಜುನಾಥ್ ಅರಕೇರಿ (41) ತನ್ನ ಅಳಿಯನ ಮಗ ಮೂರು ವರ್ಷದ ವೇದಾಂತ, 4 ವರ್ಷದ ಪವನ, 6 ವರ್ಷದ ಧನ್ಯಾ ಎಂಬುವವರನ್ನು ನದಿಗೆ ಎಸೆದಿದ್ದಾನೆ ಎನ್ನಲಾಗಿದೆ.
ಮಂಜುನಾಥ ಅರಕೇರಿ ಎಂಬಾತ ಮೊದಲು ಮೂವರು ಮಕ್ಕಳನ್ನು ನದಿಗೆ ಎಸೆದು ಬಳಿಕ ತಾನೂ ಸಹ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇವರು ಮುಂಡರಗಿ ತಾಲೂಕಿನ ಮಕ್ತುಂಪೂರ ಗ್ರಾಮದ ನಿವಾಸಿ ಎನ್ನಲಾಗಿದೆ.
ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವೆಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.