ಚಿಕ್ಕಮಗಳೂರು:- ಜಿಲ್ಲೆಯ ಕಳಸದ ಮರಸಣಿಗೆ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತು ಪತಿಯೇ ಪತ್ನಿಯನ್ನು ಕಬ್ಬಿಣದ ಪೈಪಿನಿಂದ ಥಳಿಸಿ ಕೊಂದ ಅಮಾನವೀಯ ಘಟನೆ ಜರುಗಿದೆ.
32 ವರ್ಷದ ಮಂಜುಳಾ ಹತ್ಯೆಯಾದ ದುರ್ದೈವಿ. ದಂಪತಿ ಕಳಸ ತಾಲೂಕಿನ ಯಮಗೊಂಡ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದರು. ಮೂಲಗಳ ಪ್ರಕಾರ, ಪತಿ-ಪತ್ನಿಯರ ನಡುವೆ ನಿತ್ಯವೂ ಜಗಳ ನಡೆಯುತ್ತಿತ್ತು. ಜಗಳ ಹೆಚ್ಚಾಗಿದ್ದರಿಂದ ಇವರನ್ನು ನೋಡಿ ಬೇಸತ್ತ ತೋಟದ ರೈಟರ್, ಇನ್ನು ಮುಂದೆ ಕೆಲಸಕ್ಕೆ ಬರಬೇಡಿ ಎಂದು ಹೇಳಿದ್ದರು ಎನ್ನಲಾಗಿದೆ.
ಹತ್ಯೆ ನಡೆದ ದಿನವೂ ದಂಪತಿ ನಡುವೆ ತೀವ್ರ ಜಗಳ ನಡೆದಿತ್ತು. ಇದರಿಂದ ಕೋಪಗೊಂಡ ಪತಿ ಮಗುವಿನ ಎದುರೇ ಕಬ್ಬಿಣದ ಪೈಪ್ನಿಂದ ಮಂಜುಳಾ ಅವರ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಕೃತ್ಯವೆಸಗಿದ ಪತಿಯ ವಿರುದ್ಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.


