ಗದಗ:- ಕೌಟುಂಬಿಕ ಕಲಹದಿಂದ ಮನನೊಂದು ಎರಡು ಮಕ್ಕಳೊಂದಿಗೆ ತಾಯಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗದಗ ನಗರದ ಭೀಷ್ಮ ಕೆರೆಯಲ್ಲಿ ಜರುಗಿದೆ.
ಆತ್ಮಹತ್ಯೆಗೆ ಯತ್ನಿಸಿದವರನ್ನು ತಾಯಿ ಗಂಗಮ್ಮ ಪುರದ, ನರಸಿಂಹ (8), ಮನೋಜ್ (10) ಎಂದು ಗುರುತಿಸಲಾಗಿದೆ. ಭೀಷ್ಮ ಕೆರೆ ಪ್ರವಾಸಿ ಮಿತ್ರ ಸಿಬ್ಬಂದಿಗಳಿಂದ ತಾಯಿ, ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಗದಗದ ಪಂಚಾಕ್ಷರಿ ನಗರ ನಿವಾಸಿಯಾದ ಮಹಿಳೆಯು, ಕೌಟುಂಬಿಕ ಕಲಹದಿಂದ ಸಾಕಷ್ಟು ನೊಂದಿದ್ದರು. ಹೀಗಾಗಿ ಆತ್ಮಹತ್ಯೆಗೆ ನಿರ್ಧರಿಸಿದ ಮಹಿಳೆ, ಮೊದಲು ಮಕ್ಕಳನ್ನು ನೂಕಿ, ನಂತರ ತಾನು ಕೆರೆಗೆ ಬೀಳಲು ಯತ್ನಿಸಿದ್ದಾರೆ. ಆದರೆ ತಾಯಿಯಿಂದ ಮಕ್ಕಳು ತಪ್ಪಿಸಿಕೊಂಡಿದ್ದಾರೆ. ಮಕ್ಕಳ ಓಡಾಟ ಗಮನಿಸಿ ತಕ್ಷಣ ಎಚ್ಚೆತ್ತ ಪ್ರವಾಸಿ ಮಿತ್ರ ಸಿಬ್ಬಂದಿಗಳು, ತಾಯಿ ಮಕ್ಕಳನ್ನು ಹಿಡಿದು 112 ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಮಾಹಿತಿ ಆಧರಿಸಿ ತಕ್ಷಣ ಆಗಿಮಿಸಿದ ಗದಗ ಶಹರ ಪೊಲೀಸರು, ಮಹಿಳೆ, ಮಕ್ಕಳನ್ನು ರಕ್ಷಿಸಿ ಬುದ್ದಿ ಹೇಳಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಗದಗ ಪ್ರವಾಸಿ ಮಿತ್ರರಾದ ಎಮ್ ಬಿ ಹೂಗಾರ, ಎಮ್ ಎನ್ ಮಾದರ ಹಾಗೂ ಕುಮಾರಿ ಎಸ್ ಎಲ್ ಕೊರವರ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.