ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ದಿಲ್ಜಿತ್ ದೊಸಾಂಜ್ ಪ್ರಮುಖರು. ನಟನೆಯ ಜೊತೆಗೆ ಗಾಯಕರಾಗಿಯೂ ಖ್ಯಾತಿ ಘಳಿಸಿರುವ ದಿಲ್ಜಿತ್ ದೊಸಾಂಜ್ ಗಾಯಕ್ಕೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆದ್ರೆ ಇದೀಗ ದಿಲ್ಜಿತ್ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು ದಿಲ್ಜಿತ್ ದೊಸಾಂಜ್ ಹಾಡುಗಳನ್ನು ಬ್ಯಾನ್ ಮಾಡುವಂತೆ ಸಿನಿಮಾ ಕಾರ್ಮಿಕರ ಒಕ್ಕೂಟ ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಪಾಕಿಸ್ತಾನದ ಕಲಾವಿದರ ಜೊತೆ ದಿಲ್ಜಿತ್ ಕೈ ಜೋಡಿಸಿರುವುದೇ ಇದಕ್ಕೆ ಕಾರಣವಾಗಿದೆ. ಪಾಕ್ ಉಗ್ರರು ಪಹಲ್ಗಾಮ್ನಲ್ಲಿ ದಾಳಿ ಮಾಡಿದ ಬಳಿಕ ಪಾಕ್ ಜೊತೆಗೆ ಎಲ್ಲ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಆದರೂ ದಿಲ್ಜಿತ್ ದೊಂಸಾಜ್ ಅವರು ಪಾಕಿಸ್ತಾನದ ನಟಿ ಹಾನಿಯಾ ಆಮಿರ್ ಜೊತೆ ಸಿನಿಮಾ ಪ್ರಚಾರದಲ್ಲಿ ಕೈ ಜೋಡಿಸಿದ್ದಾರೆ. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
‘ಸರ್ದಾರ್ ಜೀ 3’ ಸಿನಿಮಾದಲ್ಲಿ ಹಾನಿಯಾ ಆಮಿರ್ ಮತ್ತು ದಿಲ್ಜಿತ್ ದೊಸಾಂಜ್ ನಟಿಸಿದ್ದಾರೆ. ಇದು ಪಂಜಾಬಿ ಸಿನಿಮಾವಾಗಿದ್ದು ಚಿತ್ರದಲ್ಲಿ ಪಾಕ್ ಕಲಾವಿದರು ನಟಿಸಿರುವುದರಿಂದ ಭಾರತದಲ್ಲಿ ಬಿಡುಗಡೆಗೆ ಅವಕಾಶ ನೀಡಿಲ್ಲ. ಆದರೆ ವಿದೇಶದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಭಾರತದ ಗಾಯಕನಾಗಿ ಪಾಕ್ ಕಲಾವಿಧರು ನಟಿಸಿರುವ ಸಿನಿಮಾವನ್ನು ಪ್ರಚಾರ ಮಾಡುತ್ತಿರುವುದುರಿಂದ ದಿಲ್ಜಿತ್ ದೊಸಾಂಜ್ ಮೇಲೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನಕ್ಕೆ ಸಂಬಂಧಿಸಿದ ಯಾವುದೇ ಕಂಟೆಂಟ್ಗಳನ್ನು ಭಾರತದ ಒಟಿಟಿಯಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರವೇ ಎಚ್ಚರಿಕೆ ನೀಡಿತ್ತು. ಆದರೂ ಕೂಡ ದಿಲ್ಜಿತ್ ದೊಸಾಂಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಾನಿಯಾ ಆಮಿರ್ ಇರುವ ಟ್ರೇಲರ್ ಹಂಚಿಕೊಂಡಿದ್ದಾರೆ.