ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ವಿದ್ಯಾವರ್ಧಕ ಸಂಸ್ಥೆಯ ಸಿ.ಎಸ್. ಪಾಟೀಲ ಬಾಲಕಿಯರ ಪ್ರೌಢಶಾಲೆಯಲ್ಲಿ 39 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಆರ್. ಕೊಪ್ಪದ ಅವರಿಗೆ ಸಂಸ್ಥೆ ತ್ರಿವಳಿ ಶಾಲೆಗಳಿಂದ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿ, ಒಂದು ಸಂಸ್ಥೆ ನಡೆಯಲು ಉತ್ತಮ ಶಿಕ್ಷಕ-ಸಿಬ್ಬಂದಿಯೊಂದಿಗೆ ಉತ್ತಮ ಶಿಕ್ಷಕೇತರ ಸಿಬ್ಬಂದಿಯೂ ಅಷ್ಟೇ ಮುಖ್ಯವಾಗಿ ಬೇಕಾಗುತ್ತದೆ. ಎಲ್ಲರೂ ಉತ್ತಮ ಕೆಲಸಗಾರರಾದರೆ ಸಂಸ್ಥೆಯು ಚೆನ್ನಾಗಿ ಮುಂದುವರೆಯಲು ಸಾಧ್ಯವಾಗುತ್ತದೆ ಬಿ.ಆರ್. ಕೊಪ್ಪದರು ತಮ್ಮ 39 ವರ್ಷದ ಸುದೀರ್ಘ ಅವಧಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಆಡಳಿತ ಮಂಡಳಿ ಸದಸ್ಯರಾದ ಎಂ.ಎಸ್. ಮಲ್ಲಾಪೂರ ಮಾತನಾಡಿ, ಭರಮಪ್ಪ ಕೊಪ್ಪದರವರು ನಿವೃತ್ತಿಯ ನಂತರವೂ ಅವಶ್ಯವಿದ್ದಾಗ ಬಂದು ಶಾಲೆಯ ಜವಾಬ್ದಾರಿಯನ್ನು ನಿಭಾಯಿಸಲಿ ಎಂದರು.
ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಬಿ.ವಿ. ಹೊರಪೇಟಿ ಮಾತನಾಡಿ, ನಾವು ಶಿಕ್ಷಕರಾದರೂ ಕೊಪ್ಪದರೊಂದಿಗೆ ಸ್ನೇಹಿತನಂತೆ ನಡೆದುಕೊಂಡಿದ್ದೇವೆ. ಅವರು ಒಬ್ಬ ಒಳ್ಳೆಯ ಸ್ನೇಹಜೀವಿಯಂತೆ ಕಾರ್ಯನಿರ್ವಹಿಸಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ಕೊಪ್ಪದ ಮಾತನಾಡಿ, ನಾನು, ಸಂಸ್ಥಾಪಕರಾದ ಸಿ.ಎಸ್. ಪಾಟೀಲರ ಕೃಪೆಯಿಂದ ಇಲ್ಲಿ ನೌಕರಿ ದೊರಕಿಸಿಕೊಂಡು ಸೇವೆಗೈದಿದ್ದೇನೆ. ಅವರ ಋಣ, ಸಂಸ್ಥೆಯ ಋಣ ನನ್ನ ಮೇಲಿದೆ ಎಂದರು. ಮುಖ್ಯಾಧ್ಯಾಪಕ ಎಸ್.ಜಿ. ಕೋಲ್ಮಿ, ವಾಯ್.ಉಣಕಲ್ ಮಾತನಾಡಿದರು.
ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಡಾ. ರಾಮಚಂದ್ರ ಹಂಸನೂರ ಹಾಗೂ ಬಾಲಕರ ಪ್ರೌಢಶಾಲೆ ಮುಖ್ಯಾಧ್ಯಾಪಕ ಎಮ್.ಆರ್. ನಾಯಿಕ, ಎನ್.ಎಸ್. ಹಂಜಗಿ ವೇದಿಕೆಯಲ್ಲಿದ್ದರು. ಕೆ.ಆಯ್. ಪಾಟೀಲ ಸ್ವಾಗತಿಸಿದರೆ, ಆಯ್.ಎಸ್. ಗೌಡರ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ಹೊನಗುಡಿ ವಂದಿಸಿದರು.