ಕೃಷಿಕ ಹೈಟೆಕ್ ಸೀಡ್ಸ್ ಕಂಪನಿಯಿಂದ ರೈತರಿಗೆ ಮೋಸ: ನೊಂದ ರೈತರಿಗೆ ನ್ಯಾಯ ಕೊಡಿಸಲು ಒತ್ತಾಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಂಬಿದ ರೈತರಿಗೆ ಕೃಷಿಕ ಹೈಟೆಕ್ ಸೀಡ್ಸ್ ಕಂಪನಿ ಮೋಸ ಮಾಡಿದೆ. ರೈತರಿಂದ ಕೋಟ್ಯಾಂತರ ರೂ ಮೊತ್ತದ ಕಡೆಲೆ, ಹೆಸರು ಖರೀದಿ ಮಾಡಿದ ಕಂಪನಿ ರೈತರ ಫಸಲು ಮಾರಾಟ ಮಾಡಿಕೊಂಡು ಹಣ ಪಡೆದ್ದು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಅವರಿಂದ ರೈತರಿಗೆ ಸಲ್ಲಬೇಕಾದ ಹಣ ತಲುಪಿಲ್ಲ. ಈ ಕಂಪನಿಯ ಮಾಲಕರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ರೈತರಿಗೆ ಹಣ ಕೊಡಿಸಬೇಕು ಎಂದು ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

Advertisement

ಸೀಡ್ಸ್ ಕಂಪನಿಗೆ ಬೆಳೆ ಮಾರಾಟ ಮಾಡಿ ಮೋಸಹೋದ ರೈತರು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಎರಡು ವರ್ಷಗಳಿಂದ ಕೃಷಿಕ ಹೈಟೆಕ್ ಸೀಡ್ಸ್ ಕಂಪನಿಯಿಂದ ಬರಬೇಕಾದ 9 ಕೋಟಿ 50 ಲಕ್ಷ ರೂ ಹಣಕ್ಕಾಗಿ ಗದಗ ಹಾಗೂ ಕೊಪ್ಪಳ ಜಿಲ್ಲೆಗಳ 18ಕ್ಕೂ ಹೆಚ್ಚು ಗ್ರಾಮಗಳ ನೂರಾರು ರೈತರು ಪರದಾಡುತ್ತಿದ್ದಾರೆ. ರೈತರ ಮನೆಯಲ್ಲಿ ಶುಭಕಾರ್ಯಗಳು ನಿಂತು ಹೋಗಿವೆ. ಕೃಷಿಕ ಹೈಟೆಕ್ ಸೀಡ್ಸ್ ಕಂಪನಿ ಜೊತೆ ಹತ್ತು ವರ್ಷಗಳ ವ್ಯವಹಾರ ಹೊಂದಿದ್ದ ರೈತರಿಗೆ ಮಹಾ ಮೋಸವಾಗಿದೆ.

ಹಣ ಬಾರದಕ್ಕೆ ನಾಲ್ಕು ಜನ ರೈತರು ಮಾನಸಿಕವಾಗಿ ಕುಗ್ಗಿ ಸಾವನ್ನಪ್ಪಿದ್ದಾರೆ. ನ್ಯಾಯಕ್ಕಾಗಿ ರೈತರು ಸಚಿವ ಎಚ್.ಕೆ. ಪಾಟೀಲರ ಮೊರೆಹೋಗಿದ್ದಾರೆ. ಸಚಿವರು ಕಂಪನಿಯ ಪಾಲುದಾರರನ್ನು ಕರೆಸಿ ಸಂಧಾನ ಮಾಡಿ ಹಣ ನೀಡುವಂತೆ ಸೂಚಿಸಿದರೂ ಕಂಪನಿಯವರು ಕ್ಯಾರೇ ಎನ್ನುತ್ತಿಲ್ಲ. ರೈತರಿಗೆ ಹಣ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಕೌಟುಂಬಿಕ ಕಲಹದ ನಾಟಕವಾಡಿದ್ದಾರೆ. ಹಣಕ್ಕಾಗಿ ಅಲೆದ ರೈತರ ಸಹನೆಯ ಕಟ್ಟೆ ಒಡೆದಿದೆ. ಹೀಗಾಗಿ ಎಪ್ರಿಲ್ 3ರಂದು ನೂರಾರು ರೈತರು ಹೋರಾಟಕ್ಕೆ ಮುಂದಾಗಿದ್ದೇವೆ. ಜಿಲ್ಲಾಧಿಕಾರಿಗಳೇ ಮಧ್ಯಸ್ತಿಕೆ ವಹಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಗದಗ ನಗರದ ಚಂದ್ರಶೇಖರ ಅರಹುಣಸಿ ಹಾಗೂ ಅರವಿಂದ ಹುಚ್ಚಣ್ಣವರ ಮಾಲೀಕತ್ವದ ಕೃಷಿಕ ಹೈಟೆಕ್ ಸೀಡ್ಸ್ ಕಂಪನಿ 160 ರೈತರಿಂದ ಸುಮಾರು 65 ಸಾವಿರ ಕ್ವಿಂಟಾಲ್ ಕಡಲೆ ಹಾಗೂ 12 ಸಾವಿರ ಕ್ವಿಂಟಾಲ್ ಹೆಸರು ಖರೀದಿ ಮಾಡಿದ್ದಾರೆ. ಖರೀದಿ ಬಳಿಕ ಸೆಪ್ಟೆಂಬರ್ 30, 2023ರಂದು ಓರ್ವ ಪಾಲುದಾರ ಚಂದ್ರಶೇಖರ ಅರಹುಣಸಿ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಚಂದ್ರಶೇಖರ ರೈತರ ಹಣದ ಬಗ್ಗೆ ಡೆತ್ ನೋಟ್‌ನಲ್ಲಿ ವಿವರವಾಗಿ ಬರೆದಿಟ್ಟಿದ್ದಾರಂತೆ. ಆದರೆ, ರೈತರು ಕಡಲೆ, ಹೆಸರು ನೀಡಿ ಎರಡು ವರ್ಷಗಳು ಕಳೆದರೂ ನೈಯಾಪೈಸೆ ಹಣ ನೀಡಿಲ್ಲ ಎಂದು ಮೋಸಹೋದ ರೈತರಾದ ವಸಂತ ಮೇಟಿ, ವೆಂಕಣ್ಣ ಯರಾಸಿ ಆರೋಪಿಸಿದರು.


Spread the love

LEAVE A REPLY

Please enter your comment!
Please enter your name here