ಗದಗ: ರೈತರಿಂದ ಕಡಲೆ ಖರೀದಿ ಮಾಡಿದ್ದ ವ್ಯಾಪಾರಿಯೋರ್ವ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ತೀವ್ರ ಸ್ವರೂಪ ತಾಳಿದ್ದು, ಇಬ್ಬರು ರೈತ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ.
ಗದಗ ಜಿಲ್ಲಾಡಳಿತ ಭವನದ ಮುಂದೆ ಕಳೆದ ಮೂರು ದಿನಗಳಿಂದ ನಡೆಯುತ್ತಿರೋ ಪ್ರತಿಭಟನೆ ಬುಧವಾರ ಮಧ್ಯಾಹ್ನ ತಾರಕಕ್ಕೇರಿದ್ದು, ಪ್ರತಿಭಟನೆ ವೇಳೆ ರೈತ ಮಹಿಳೆಯರು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದರು.
ಸರಸ್ವತಿ ದಾಸರ ಹಾಗೂ ಗೀತಾ ಬಾಲಪ್ಪನವರ ವಿಷ ಸೇವಿಸಿದ ರೈತ ಮಹಿಳೆಯರಾಗಿದ್ದು, ತಕ್ಷಣ ರೈತ ಮಹಿಳೆಯರನ್ನು ಪೊಲೀಸರು ಅಂಬುಲೆನ್ಸ್ ನಲ್ಲಿ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಹಿನ್ನೆಲೆ
ಆಗೋ ಹೀಗೋ ಸಾಲ ಸೋಲ ಮಾಡಿ ಪಾಪ ರೈತರು ಕಡಲೆ ಬೆಳೆದಿದ್ದರು. ಮಾರುಕಟ್ಟೆ ದರಕ್ಕಿಂತ ಕೊಂಚ ಹೆಚ್ಚು ಬೆಲೆ ಸಿಗುತ್ತೆಂದು ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದರು. ಆದ್ರೆ ಕಡಲೆ ಖರೀದಿ ಮಾಡಿದ ವ್ಯಾಪಾರಿ ರೈತರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದ್ದ.
ಅನ್ನದಾತರ ನಿರಂತರ ಹೋರಾಟದ ಫಲವಾಗಿ ಕೋಟ್ಯಾಂತರ ರೂಪಾಯಿ ಹಣ ವಾಪಾಸ್ ಕೊಟ್ಟಿದ್ದರೂ ಇನ್ನು ಕೊಡಬೇಕಾದ 6 ಕೋಟಿ ಹಣ ನೀಡದೇ ಖದೀಮ ಸತಾಯಿಸುತ್ತಿದ್ದಾನೆ. ಹೀಗಾಗಿ ಜಿಲ್ಲೆಯ ಅನ್ನದಾತರು ಮತ್ತೊಮ್ಮೆ ಹೋರಾಟದ ಹಾದಿ ತುಳಿದಿದ್ದಾರೆ.
ಗದಗ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ನಡೆಯುತ್ತಿದ್ದು, ಗದಗ ಜಿಲ್ಲೆಯ ಕುರ್ತಕೋಟಿ, ಅಸುಂಡಿ, ಬಿಂಕದಕಟ್ಟಿ, ಅಂತೂರ ಬೆಂತೂರ ಸೇರಿ 11 ಗ್ರಾಮಗಳ ರೈತರು ಜಿಲ್ಲಾಡಳಿತ ಭವನದ ಮುಂದೆ ಧರಣಿ ಕೈಗೊಂಡಿದ್ದಾರೆ. ಗದಗ ಜಿಲ್ಲೆಯ 10 ಕ್ಕೂ ಹೆಚ್ಚು ಗ್ರಾಮದ ರೈತರು ಕಡಲೆ ಬೆಳೆದು 11 ತಿಂಗಳ ಹಿಂದೆ ಮಾರಾಟ ಮಾಡಿದ್ದರು. ಆದರೆ ರೈತರಿಂದ ಕಡಲೆ ಖರೀದಿ ಮಾಡಿದ್ದ ದಾವಣಗೆರೆ ಮೂಲದ ಮಾರುತಿ ಗೌಡ ರೈತರಿಗೆ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದ.
ಹೀಗಾಗಿ ಕಳೆದ ಹನ್ನೊಂದು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಅಲ್ಲದೇ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಹಣ ಕೂಡಿಸುವ ಭರವಸೆ ನೀಡಿತ್ತು. ಜನವರಿ 5 ರೊಳಗೆ ಬಾಕಿ ಹಣ ಕೊಡಿಸದಿದ್ರೆ ಜನವರಿ 6 ರಂದು ಗದಗ ಜಿಲ್ಲಾಡಳಿತ ಕಚೇರಿ ಮುಂದೆ ಹೋರಾಟ ಖಚಿತ ಅನ್ನೋ ಎಚ್ಚರಿಕೆಯನ್ನು ಈ ಹಿಂದೆ ರೈತರು ನೀಡಿದ್ದರು. ಅದರಂತೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ.