ಕಾರವಾರ: ಕಾರವಾರ ಜಿಲ್ಲೆಯ ಅಂಕೋಲದ ರಾಷ್ಟ್ರೀಯ ಹೆದ್ದಾರಿ 63ರ ಅಗಸೂರು ಬಳಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಓರ್ವ ಪ್ರಯಾಣಿಕ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ಸು, 18 ಪ್ರಯಾಣಿಕರೊಂದಿಗೆ ತೀವ್ರ ವೇಗದಲ್ಲಿ ಸಾಗುತ್ತಿದ್ದ ವೇಳೆ, ಅಗಸೂರಿನ ಬ್ರಿಡ್ಜ್ ತಡೆಗೋಡೆಗೆ ಡಿಕ್ಕಿಯಾಗಿ ನೇರವಾಗಿ ಹಳ್ಳಕ್ಕೆ ಉರುಳಿದಿದೆ.
ಪರಿಣಾಮ ಬಸ್ನಲ್ಲಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಉಳಿದವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಂಭೀರ ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದವರಿಗೆ ಅಂಕೋಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೃತನ ಗುರುತು ಪತ್ತೆಯಾಗಬೇಕಿದೆ.
ಸ್ಥಳಕ್ಕೆ ಅಂಕೋಲ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕ್ರೇನ್ ಮೂಲಕ ಬಸ್ಸನ್ನು ಹಳ್ಳದಿಂದ ಮೇಲಕ್ಕೆತ್ತಿದ್ದಾರೆ. ಘಟನೆ ಸಂಬಂಧ ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.