ವಿಜಯಸಾಕ್ಷಿ ಸುದ್ದಿ, ಗದಗ: ರೋಟರಿ ಕ್ಲಬ್ ಹಾಗೂ ರೋಟರಿ ಕ್ಲಬ್ ವೆಲ್ಫೇರ್ ಸೊಸೈಟಿ ಗದಗ-ಬೆಟಗೇರಿ ವತಿಯಿಂದ ಫೆ. 21ರಂದು ರೋಟರಿ ಕಮ್ಯುನಿಟಿ ಕೇರ್ ಸೆಂಟರ್ನಲ್ಲಿ 200ನೇ ನೇತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಖ್ಯಾತ ವೈದ್ಯ ಡಾ. ಶೇಖರ್ ಸಜ್ಜನ್ ಮಾಹಿತಿ ನೀಡಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಕ್ಲಬ್ ಮತ್ತು ವೆಲ್ಫೇರ್ ಸೊಸೈಟಿ ಕಳೆದ 20 ವರ್ಷದಿಂದ ಈ ಸಾಮಾಜಿಕ ಸೇವೆಯನ್ನು ನೀಡುತ್ತಾ ಬಂದಿದ್ದು, ಶುಕ್ರವಾರ ನಡೆಯುವ ಶಿಬಿರವನ್ನು ತೋಂಟದಾರ್ಯ ಮಠದ ಜ. ತೋಂಟದ ಸಿದ್ಧರಾಮ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದರು.
ರೋಟರಿ ಕ್ಲಬ್ ಈವರೆಗೆ 3800ಕ್ಕೂ ಹೆಚ್ಚು ಉಚಿತ ಶಸ್ತ್ರಚಿಕಿತ್ಸೆ ನಡೆಸಿದೆ. ಜಗತ್ತಿನ 125 ದೇಶಗಳಲ್ಲಿ ರೋಟರಿ ಸಂಸ್ಥೆ ಸಮಾಜ ಸೇವೆ ಮಾಡುತ್ತಿದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳಲ್ಲಿ ತನ್ನ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದು, ಹಿರಿಯರು, ಮಕ್ಕಳು, ಮಹಿಳೆಯರಿಗೆ ಪ್ರತ್ಯೇಕ ಸಂಸ್ಥೆ ನಿರ್ಮಿಸುವ ಮೂಲಕ ಸಮಾಜದಲ್ಲಿ ತನ್ನದೇ ಆದ ವಿಶಿಷ್ಠ ಛಾಪು ಮೂಡಿಸಿದೆ ಎಂದರು.
ಡಾ. ಶ್ರೀಧರ್ ಸುಲ್ತಾನಪುರ ಮಾತನಾಡಿ, ನೇತ್ರ ಪರೀಕ್ಷಿಸಿದ ನಂತರ ಶಸ್ತ್ರ ಚಿಕಿತ್ಸೆಗೆ ಅರ್ಹರಾದವರಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಶಸ್ತ್ರ ಚಿಕಿತ್ಸೆ ನಡೆಸಿದ ಮೇಲೆ ಕನ್ನಡಕದೊಂದಿಗೆ ಅವರನ್ನು ಬೀಳ್ಕೊಡಲಾಗುವುದು. ಯಾವುದೇ ತಾರತಮ್ಯವಿಲ್ಲದೇ ಎಲ್ಲ ರೋಗಿಗಳನ್ನು ನೋಡಿಕೊಳ್ಳಲಾಗುವುದು. ದಾನಿಗಳ ಸಹಾಯದಿಂದ ನಮ್ಮ ಸಂಸ್ಥೆ ಉತ್ತಮ ಸೇವೆ ಮಾಡುತ್ತಾ ಸಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಆರ್.ಬಿ ಉಪ್ಪಿನ್, ಸಂತೋಷ ಅಕ್ಕಿ, ಸಿ.ಪಿ ಹುಣಸಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.