ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ನೀರಾವರಿ ನಿಗಮ ಗದಗ ಸಿಂಗಟಾಲೂರ ಏತ/ಹನಿ ನೀರಾವರಿ ಯೋಜನೆ ಪ್ಯಾಕೇಜ್-3ರ ಫಲಾನುಭವಿ ರೈತರ ಹೊಲದಲ್ಲಿ ನೆಟಾಫೀಮ ಇರಿಗೇಷನ್ ಇಂಡಿಯಾ ಪ್ರೈ ಲಿ. ಇವರು ಹನಿ ನೀರಾವರಿ ಮೂಲಕ ಮೆಕ್ಸಿಕನ್ ಬೀನ್ಸ್ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ ಜಾಲಣ್ಣವರ, ಸಹಾಯಕ ಅಭಿಯಂತರ ಬಸವರಾಜ ಕಡೇಮನಿ, ನೆಟಾಫಿಮ್ ಎಮ್.ಇ.ಐ.ಎಲ್ ಅಧಿಕಾರಿಗಳು ಮತ್ತು ಯೋಜನಾ ಫಲಾನುಭವಿ ರೈತರು ಭಾಗವಹಿಸಿದ್ದರು.
ಲಕ್ಕುಂಡಿ ಗ್ರಾಮದ ಹೇಮಣ್ಣ ಗೋವಿಂದಪ್ಪ ನೂಕಾಪೂರ ಅವರು ಪಸ್ತುತ ಮುಂಗಾರು ಹಂಗಾಮಿನಲ್ಲಿ ಮೆಕ್ಸಿಕನ್ ಬ್ಲ್ಯಾಕ್ ಬೀನ್ಸ (ಕಪ್ಪು ಹುರಳಿ) ಬೆಳೆಯನ್ನು ಹನಿ ನೀರಾವರಿ ಪದ್ಧತಿಯ ಮೂಲಕ ಬೆಳೆದು ಗ್ರಾಮಕ್ಕೆ ಮಾದರಿ ರೈತರಾಗಿದ್ದಾರೆ.
ಪ್ರೊಜೆಕ್ಟ್ ಮ್ಯಾನೇಜರ್ ರವಿರಾಜಗೌಡ ಪಾಟೀಲ, ಬೇಸಾಯ ತಜ್ಞ ಆನಂದ ಆಲೂರ ಮಾತನಾಡಿ, ಈ ಬೆಳೆಯು ಕಡಿಮೆ ಅವಧಿಯಲ್ಲಿ ಬೆಳೆಯುವ ದ್ವಿದಳ ಧಾನ್ಯವಾಗಿದೆ. ಇದನ್ನು ಕಪ್ಪು ಮತ್ತು ಕೆಂಪು ಮಣ್ಣಿನಲ್ಲಿ ಬೆಳೆಯಬಹುದು. ಕಡಿಮೆ ಪ್ರಮಾಣದ ನೀರು ಮತ್ತು ಪೋಶಕಾಂಶಗಳನ್ನು ಉಪಯೋಗಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಬಹುದು. ಈ ಬೆಳೆಯನ್ನು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆಯಬಹುದು. ಜೂನ್ ಮೊದಲ ವಾರ ಬಿತ್ತನೆಗೆ ಸೂಕ್ತವಾಗಿದೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಜಾಲಣ್ಣವರ, ಹನಿ ನೀರಾವರಿ ಉಪಯೋಗಿಸಿಕೊಂಡು ಕೃಷಿಯಲ್ಲಿ ಲಾಭವಾಗುವ ಹೊಸ ಬೆಳೆಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಿದರು.
ವ್ಯವಸಾಯದಲ್ಲಿ ಅಧಿಕ ಇಳುವರಿ ಪಡೆಯಲು ರೈತರು ತಮ್ಮ ಹೊಲಗಳಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕೆಂದು ಬಸವರಾಜ ಕಡೇಮನಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸುರೇಶ ರ್ಯಾವಣಕಿ, ಸಂತೋಷ ವೀರಾಪೂರ, ಸುರೇಶ ಅಬ್ಬಿಗೇರಿ ಮತ್ತು ಫಲಾನುಭವಿ ರೈತರು ಭಾಗವಹಿಸಿದ್ದರು.