ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕಲಾ ವಿಭಾಗದ ಅಂತಿಮ ವರ್ಷದ ಸಮಾಜಶಾಸ್ತ್ರ ವಿಷಯದ ಹಾಗೂ ಅಂತಿಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ನೇಕಾರಿಕೆ ಉದ್ಯಮದ ಕ್ಷೇತ್ರಾಧ್ಯಯನ ಕುರಿತು ಪ್ರಸಿದ್ಧ ಉದ್ಯಮಿ ಬಲರಾಮ ಬಸವಾ ಅವರ ಬೆಟಗೇರಿಯ ನೇಕಾರಿಕೆ ಮಗ್ಗಗಳ ಉದ್ಯಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಉದ್ಯಮಿ ಪ್ರಸನ್ನ ಬಸವಾ ನೇಕಾರಿಕೆ ಉದ್ಯಮ ಬೆಳೆದು ಬಂದ ರೀತಿ, ಉತ್ಪಾದನೆ ಹಾಗೂ ಮಾರುಕಟ್ಟೆಗೆ ಸಂಬಂದಿಸಿದ ವಿಷಯಗಳ ಮಾಹಿತಿ ನೀಡುತ್ತಾ, ಈ ಉದ್ಯಮವು ಪ್ರಾಚೀನ ಕಾಲದಿಂದಲೂ ಕೃಷಿಯೊಂದಿಗೇ ಬೆಳೆದು ಬಂದಿದೆ. ನೇಕಾರಿಕೆಯ ಮೂಲಕ ಸೀರೆ ಹಾಗೂ ವಿವಿಧ ಬಟ್ಟೆಗಳನ್ನು ತಯಾರಿಸುತ್ತಿದ್ದು, ಈ ಎಲ್ಲ ಉತ್ಪಾದನೆಗಳು ದೇಶದ ವಿವಿಧ ಮಾರುಕಟ್ಟೆಗಳಿಗೆ ಪೂರೈಕೆಯಾಗುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಸೀರೆ ನೇಯುವ ಕೌಶಲ್ಯಗಳ ಪ್ರಕ್ರಿಯೆ ಕುರಿತು ಸಮಗ್ರ ಮಾಹಿತಿ ನೀಡಿ, ಇಂದಿನ ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿಯೂ ಈ ಉದ್ಯಮವು ಗುಣಮಟ್ಟದ ಉತ್ಪಾದನೆ ಹೊಂದಿದೆ. ಈ ಕುರಿತು ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಕೈಗೊಂಡು ತಾವು ಯಶಸ್ವಿ ಉದ್ಯಮಿಯಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಸನ್ನ ಬಸವಾ, ಪ್ರೊ ಕೆ.ವಿ. ಬಾಗಲಕೋಟಿ, ಪ್ರೊ. ಆನಂದ ದೇಸಾಯಿಪಟ್ಟಿ, ಪ್ರೊ. ಶಿವಕುಮಾರ ಅಣ್ಣಿಗೇರಿ, ಪ್ರೊ. ನೇತ್ರಾ ಹೂಗಾರ ಹಾಗೂ ನೇಕಾರಿಕೆ ಉದ್ಯಮದ ಸಿಬ್ಬಂದಿ ವರ್ಗದವರಿದ್ದರು.