ಮಂಗಳೂರು:- ಮಂಗಳೂರು ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೈಕ್ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್ ಮೇಲೆ ನೇತಾಡಿರುವ ಎದೆ ಝಲ್ ಎನಿಸುವ ಘಟನೆ ನಡೆದಿದೆ. ಈ ಮೂಲಕ ಭೀಕರ ಅಪಘಾತದ ಮೂಲಕ ಕೊಲೆ ಯತ್ನ ನಡೆದಿದೆ.
ಮುರಳಿ ಪ್ರಸಾದ್ ಎನ್ನುವಾತ ಬೈಕ್ ಮೇಲೆ ತೆರಳುತ್ತಿದ್ದು, ಈತನಿಗೆ ಗುದ್ದಿ ಹತ್ಯೆ ಮಾಡುವ ಪ್ಲ್ಯಾನ್ ಇತ್ತು. ಆದ್ರೆ, ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಕಾರು ಗುದ್ದಿದೆ. ಪರಿಣಾಮ ಮಹಿಳೆ ಕಾಂಪೌಂಡ್ ಮೇಲೆ ಬಿದ್ದು ನೇತಾಡಿದ್ದಾಳೆ. ಬಳಿಕ ಸ್ಥಳೀಯರು ಓಡೋಡಿ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ಕಾರು ಚಾಲಕ ಸತೀಶ್ ಕುಮಾರ್ ಈ ಕೃತ್ಯ ಎಸಗಿದ್ದಾನೆ. ಅದೃಷ್ಟವಶಾತ್ ಮಹಿಳೆ ಬದುಕಿದ್ದಾಳೆ.
ಕಳೆದ ಎರಡ್ಮೂರು ವರ್ಷಗಳಿಂದ ಅಕ್ಕಪಕ್ಕದ ಮನೆಯವರ ನಡುವೆ ತಕರಾರು ಇದ್ದು, ಇದೇ ವಿಚಾರಕ್ಕೆ ಮುರಳಿ ಪ್ರಸಾದ್ನನ್ನು ಕೊಲ್ಲಲು ಸತೀಶ್ ಕುಮಾರ್ ಸ್ಕೆಚ್ ಹಾಕಿದ್ದ. ಅದರಂತೆ ಮಾರ್ಚ್ 13 ರಂದು ಮುರಳಿ ಪ್ರಸಾದ್ ಬೈಕ್ನಲ್ಲಿ ಹೋಗುತ್ತಿರುವುದನ್ನು ನೋಡಿ ಸತೀಶ್ ಕುಮಾರ್ ಕಾರಿನಿಂದ ಗುದ್ದಲು ಪ್ರಯತ್ನಿಸಿದ್ದಾನೆ.
ಆದ್ರೆ, ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಗುದ್ದಿದ್ದಾನೆ. ಈ ಸಂಬಂಧ ಕಾರು ಚಾಲಕ ಸತೀಶ್ ಕುಮಾರ್ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ. ಇನ್ನು ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲೂ ಸಹ ಹಿಟ್ ಆ್ಯಂಡ್ ರನ್ ಕೇಸ್ ಬುಕ್ ಆಗಿದೆ.