ಕನ್ನಡ ಕಿರುತೆರೆಯ ಖ್ಯಾತ ನಿರ್ಮಾಪಕ ಹಾಗೂ ನಟ ಸತ್ಯ ಹಾಗೂ ನಟಿ ನಿರ್ಮಲಾ ದಂಪತಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಧಾರವಾಹಿ ನಿರ್ಮಾಣಕ್ಕಾಗಿ ಕೋಟಿ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆ ಎಂದು ಅಗ್ನಿ ಯು ಸಾಗರ್ ಎಂಬಾತ ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ.
ಸೃಜನ್ ಲೋಕೇಶ್ ಒಡೆತನದ ಲೋಕೇಶ್ ಪ್ರೊಡಕ್ಷನ್ಸ್ ನ ಜಿಪಿಎ ಹೋಲ್ಡರ್ ಆಗಿರುವ ಅಗ್ನಿ ಯು ಸಾಗರ್ ಎಂಬುವವರು ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಗೆ ಸತ್ಯ ಹಾಗೂ ನಿರ್ಮಲಾ ವಿರುದ್ಧ ಲಿಖಿತ ದೂರು ನೀಡಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿ ನಿರ್ಮಾಣಕ್ಕಾಗಿ ಒಂದು ಕೋಟಿ ಹಣವನ್ನು ನಟ ಸತ್ಯ ದಂಪತಿ ಸಾಲವಾಗಿ ಪಡೆದಿದ್ದಾರೆ. 2023ರ ನವೆಂಬರ್ ನಲ್ಲಿ ಅಗ್ರಿಮೆಂಟ್ ಅನ್ನು ಆರೋಪಿಗಳು ಮಾಡಿಕೊಂಡಿದ್ದರು. ಏಪ್ರಿಲ್ 1ನೇ ತಾರೀಖು 2024 ರಿಂದ ಪ್ರತೀ ತಿಂಗಳು 5 ಲಕ್ಷ ಹಣವನ್ನು ವಾಪಸ್ ಕೊಡೋದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದ್ರೆ ಈವರೆಗೂ ಯಾವುದೇ ಹಣ ಪಾವತಿಯಾಗಿಲ್ಲ. ಷರತ್ತು ಉಲ್ಲಂಘನೆ ಮಾಡಿರೋದಾಗಿ ದೂರು ಅನ್ನು ಪೊಲೀಸ್ ಠಾಣೆಗೆ ನೀಡಲಾಗಿದೆ.
ಸತ್ಯ ಹಾಗೂ ನಿರ್ಮಲಾ ದಂಪತಿ ಸಾಯಿ ನಿರ್ಮಲಾ ಪ್ರೊಡಕ್ಷನ್ ಮೂಲಕ ಧಾರವಾಹಿ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಇಬ್ಬರು ವಿರುದ್ಧವು ಎಫ್ ಐ ಆರ್ ದಾಖಲಾಗಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟನೆ ಮಾಡಿರುವ ದಂಪತಿಗೆ ಇದೀಗ ಸಂಕಷ್ಟ ಎದುರಾಗಿದೆ.


