ಧಾರವಾಡ:- ಧಾರವಾಡದ ಕೆಲಗೇರಿಯ ಸಂತೋಷ ನಗರದಲ್ಲಿ ಮನೆಯಲ್ಲಿ ಇಟ್ಟಿದ್ದ ಥಿನ್ನರ್ ಬಾಟಲಿ ಉರುಳಿ ಬಿದ್ದು ಬೆಂಕಿ ಹತ್ತಿಕೊಂಡು ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಜರುಗಿದೆ.
4 ವರ್ಷದ ಅಗಸ್ತ್ಯ ಮಾಶಾಳ್ ಮೃತ ಬಾಲಕ. ಮನೆಯಲ್ಲಿ ಬೆಂಕಿ ಕಾಯಿಸಿಕೊಳ್ಳಲೆಂದು ಕುಪ್ಪಡಿಗೆ ಇಡಲಾಗಿತ್ತು. ಅದರ ಪಕ್ಕದಲ್ಲೇ ಥಿನ್ನರ್ ಬಾಟಲಿ ಕೂಡ ಇತ್ತು. ಬಾಲಕ ಅಗಸ್ತ್ಯ ಆಟವಾಡುತ್ತ ಆ ಥಿನ್ನರ್ ಬಾಟಲಿಯ ಹತ್ತಿರ ಹೋಗಿ ಅದನ್ನು ಕೆಡವಿದ್ದಾನೆ. ತಕ್ಷಣವೇ ಥಿನ್ನರ್ಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಾಲಕನ ದೇಹ ಸುಟ್ಟು ಹೋಗಿತ್ತು.
ಘಟನೆಯಲ್ಲಿ ಬಾಲಕನನ್ನು ಉಳಿಸಲು ಹೋದ ತಂದೆಗೂ ಗಾಯವಾಗಿದೆ. ಕೂಡಲೇ ಇಬ್ಬರನ್ನೂ ಕಿಮ್ಸ್ಗೆ ರವಾನಿಸಲಾಗಿತ್ತು. ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಬೆಂಕಿ ಹತ್ತಿದ್ದ ವೇಳೆ ಮನೆಯಲ್ಲಿದ್ದವರು ಚೀರಾಡುತ್ತಿದ್ದ ಹಾಗೂ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಗಾಯಗೊಂಡಿರುವ ಬಾಲಕ ತಂದೆಗೆ ಚಿಕಿತ್ಸೆ ಮುಂದುವರೆದಿದೆ.