ಗದಗ: ಉತ್ತರ ಕರ್ನಾಟದ ಸಸ್ಯಕಾಶಿ, ಅಪಾರ ಆಯುರ್ವೇದ ಔಷಧಿಗಳ ಸಸ್ಯತಾಣ ಕಪ್ಪತ್ತಗುಡ್ಡಕ್ಕೆ ಬೆಂಕಿಯ ಕಂಟಕ ಎದುರಾಗಿದೆ.
ಹೌದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ, ಡೋಣಿ ತಾಂಡಾ ಬಳಿಯ ಕಪ್ಪತ್ತಗುಡ್ಡಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದರಿಂದ ಅಪಾರ ಪ್ರಮಾಣದಲ್ಲಿ ಸಸ್ಯ ಸಂಪತ್ತು ಸುಟ್ಟು ಭಸ್ಮವಾಗಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ಕಪ್ಪತ್ತಗುಡ್ಡ ಅಕ್ಷರಶಃ ಕಾದ ಕಬ್ಬಿಣವಾಗಿದೆ. ಮುಂಡರಗಿ RFO ಮಂಜುನಾಥ ಮೇಗಲಮನಿ ನೇತೃತ್ವದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಕಪ್ಪತ್ತಗುಡ್ಡದಲ್ಲಿ ಸುಮಾರು 70 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಾಣದ ಹಂಗು ತೊರೆದು ನಿನ್ನೆ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಇನ್ನೂ ಈ ಘಟನೆ ಬಗ್ಗೆ ಮುಂಡರಗಿ RFO ಮಂಜುನಾಥ ಮೇಗಲಮನಿ ಮಾಹಿತಿ ನೀಡಿದ್ದು, ಮೂರು ಕಡೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ನಂದಿವೇರಿಮಠದ ಸುತ್ತಮುತ್ತಲಿನ ಪ್ರದೇಶ, ಹಿರೆವಡ್ಡಟ್ಟಿ ಭಾಗದಲ್ಲಿ ಹಾಗೂ ಡೋಣಿ ತಾಂಡದ ಬಳಿಯ ಪ್ರದೇಶದಲ್ಲಿ ಹಚ್ಚಿದ್ದ ಬೆಂಕಿಯನ್ನು ತಡರಾತ್ರಿವರೆಗೂ ನಂದಿಸಲಾಗಿದೆ. ಈ ಘಟನೆಯಲ್ಲಿ ಅಂದಾಜು 25 ಹೆಕ್ಟೇರನಷ್ಟು ಕಪ್ಪತಗುಡ್ಡದ ಔಷಧೀಯ ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ ಎಂದು ಹೇಳಿದ್ದಾರೆ.