ಬೆಂಗಳೂರು:- ಬೆಂಗಳೂರಿನ ಯಲಹಂಕದಲ್ಲಿರುವ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಲಾಡ್ಜ್ ನಲ್ಲಿ ಬೆಂಕಿ ಅನಾಹುತದಿಂದ ಯುವಕ ಮತ್ತು ಯುವತಿ ಸಜೀವ ದಹನವಾಗಿರುವಂತಹ ಘಟನೆ ಜರುಗಿದೆ.
ಗದಗ ಜಿಲ್ಲೆಯ ಗಜೇಂದ್ರಗಡದ ರಮೇಶ್ ಬಂಡಿವಡ್ಡರ್ ಹಾಗೂ ಮೂಲತಃ ಬಾಗಲಕೋಟ ಜಿಲ್ಲೆಯ ಹುನಗುಂದದ ಕಾವೇರಿ ಬಡಿಗೇರ್ ಮೃತರು. ಸದ್ಯ ಇಬ್ಬರ ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಘಟನೆ ಹೇಗಾಯ್ತು?
ನಗರದ ಯಲಹಂಕದ ಸಮೀಪದಲ್ಲಿರುವ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಬಿಲ್ಡಿಂಗ್ನಲ್ಲಿದ್ದ ಲಾಡ್ಜ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಯುವಕ ಮತ್ತು ಯುವತಿ ಲಾಡ್ಜ್ ನ ಒಂದೇ ರೂಮಿನಲ್ಲಿದ್ದರು. ಲಾಡ್ಜ್ ನ ಬಾತ್ರೂಂ ಒಳಗಡೆ ಯುವತಿ ಇದ್ದು, ಬಾಗಿಲು ಹಾಕಲಾಗಿತ್ತು. ಹೊಗೆ ಬಂದ ತಕ್ಷಣ ಯುವತಿಯೇ ಲಾಡ್ಜ್ ನವರಿಗೆ ಕರೆ ಮಾಡಿದ್ದಳು. ರೂಂ ಕೂಡ ಲಾಕ್ ಆಗಿತ್ತು. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಬಂದು ಬಾಗಿಲು ಹೊಡೆದು ಒಳಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಇಬ್ಬರು ಮೃತಪಟ್ಟಿದ್ದರು.
ಮೃತ ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರೆಸ್ಟೋರೆಂಟ್ ಸಮೀಪದ ಬಿಲ್ಡಿಂಗ್ ಸ್ಫಾನಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ರೆಸ್ಟೋರೆಂಟ್ ನ 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಬ್ಬಂದಿ ಮತ್ತು ಗ್ರಾಹಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ರಕ್ಷಣೆ ಕಾರ್ಯ ಮಾಡುತ್ತಿದ್ದಾರೆ.