ವಿಜಯಸಾಕ್ಷಿ ಸುದ್ದಿ, ರೋಣ: ಸಮೀಪದ ಜಕ್ಕಲಿ ಗ್ರಾಮದ ಮೆಣಸಗಿಯವರ ಓಣಿಯ ಮಹೇಶ ಮೇಟಿ ಇವರ ಮನೆ ಹತ್ತಿರದ ಪಾಳುಬಿದ್ದ ಬಾವಿಯಲ್ಲಿ ಕಳೆದ ಒಂದು ವಾರದಿಂದ ಸಾಕು ಬೆಕ್ಕೊಂದು ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿತ್ತು. ಈ ವಿಷಯ ತಿಳಿದು ಸ್ಥಳೀಯ ಪತ್ರಕರ್ತ ಸಂಗಮೇಶ ಮೆಣಸಗಿ ರೋಣ ಅಗ್ನಿ ಶಾಮಕ ಠಾಣಾಧಿಕಾರಿಗೆ ಕರೆ ಮಾಡಿ ಬೆಕ್ಕಿನ ಪ್ರಾಣ ರಕ್ಷಿಸುವಂತೆ ಮನವಿ ಮಾಡಿದ್ದರು.
ರೋಣ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಗ್ಯಾನಪ್ಪ ಹನಮಪ್ಪ ಮಾಗಿಯವರು ತಮ್ಮ ಸಿಬ್ಬಂದಿ ಚಾಲಕ ಗೋವಿಂದ ಪೂಜಾರಿಯವರೊಂದಿಗೆ ಸ್ಥಳಕ್ಕೆ ಆಗಮಿಸಿ, ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಬೆಕ್ಕನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿ ಮಾನವೀಯತೆ ಮೆರೆದ್ದಿದಾರೆ.
ಓಣಿಯ ಜನ ಬಾವಿಗೆ ಬಿದ್ದ ಬೆಕ್ಕಿನ ಗೋಳಾಟ ನೋಡಿ ನಿತ್ಯ ಹಾಲು ಮತ್ತು ಅನ್ನವನ್ನು ಬಕೀಟ್ ಮೂಲಕ ನೀಡಿದ್ದಾರೆ. ಸ್ಥಳೀಯ ನಿವಾಸಿ ಶೇಖರ ಯಾವಗಲ್ಲ ಪತ್ರಕರ್ತನಿಗೆ ವಿಷಯ ತಿಳಿಸಿದ್ದರು. ಕಳಕಪ್ಪ ಹೊಗರಿ ಪ್ರಾಣ ಪಣಕ್ಕಿಟ್ಟು ಸುರಕ್ಷಿತವಾಗಿ ಬೆಕ್ಕಿನ ಪ್ರಾಣ ರಕ್ಷಿಸಿದ ಸಾಹಸಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಈ ರಕ್ಷಣಾ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ದಳವರೊಂದಿಗೆ ಗ್ರಾಮಸ್ಥರಾದ ಶೇಖರ ಯಾವಗಲ್ಲ, ವಿನಾಯಕ ಉಮತಾರ, ವಿನಾಯಕ ಅಥಣಿ, ರವಿ ಆದಿ, ಸಮರ್ಥ ಮೇಟಿ, ಪ್ರಭುರಾಜ ರೇಣುಕಮಠ, ಮುತ್ತುರಾಜ ಮೇಟಿ, ವಿಶ್ವನಾಥ ಬುಳ್ಳಾ ಶಿವಾನಂದ ಯಾವಗಲ್ಲ ಸೇರಿದಂತೆ ಅನೇಕರು ಇದ್ದರು.