ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರಸ್ತುತ ವಿದ್ಯಾರ್ಥಿಗಳು ಕೇವಲ ವಿದ್ಯಾವಂತರಾಗಿ ಪದವಿಯನ್ನು ಪಡೆದರೆ ಸಾಲದು. ಅದರೊಂದಿಗೆ ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರ ಕೌಶಲ್ಯ ಬಳಸಿಕೊಳ್ಳುವ ಮೂಲಕ ಉದ್ಯೋಗವನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶಿವಾನಂದ ಪಟ್ಟಣಶೆಟ್ಟಿ ಹೇಳಿದರು.
ಅವರು ಡಂಬಳದ ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಐಟಿಐನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ತಮ್ಮ ವೃತ್ತಿಯಲ್ಲಿ ಕೌಶಲ್ಯ ಪಡೆದು ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನು ಬಳಸಿಕೊಂಡು, ಉನ್ನತ ವೃತ್ತಿ ಜೀವನ ನಡೆಸುವತ್ತ ಮುನ್ನುಗ್ಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ಪ್ರಾಚಾರ್ಯ ಎಸ್.ಎಂ. ಶಿವರಾಚಯ್ಯ ಮಾತನಾಡಿ, ಐಟಿಐ ಕೋರ್ಸ್ ಮುಗಿದ ತಕ್ಷಣ ಅಪ್ರೆಂಟಿಸ್ ಕೋರ್ಸ್ ಮಾಡುವದರಿಂದ ಕೆಲಸದೊಂದಿಗೆ ಸಂಬಳವನ್ನೂ ಪಡೆಯಬಹುದು. ಪ್ರತಿಯೊಬ್ಬರೂ ಇದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಡಾ. ಉಮೇಶ ಪುರದ, ಈ.ವಿ. ಹಿರೇಮಠ, ಆರ್.ವಿ. ಘಳಗಿ, ಆರ್.ಜಿ. ಕೊರ್ಲಹಳ್ಳಿ, ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕರು ಇದ್ದರು.