ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಡಾ. ಪಂಡಿತ ಪುಟ್ಟರಾಜ ಗವಾಯಿಗಳು ತಮ್ಮ ಸಂಗೀತ ಸೇವೆಯ ಮೂಲಕವೇ ಅಂಧ, ಅನಾಥ ಮಕ್ಕಳ ಪಾಲನೆ, ಪೋಷಣೆ, ಸಂಗೀತ, ಶಿಕ್ಷಣ, ಸಂಸ್ಕಾರ ದೀಕ್ಷೆ ನೀಡಿ ಅವರ ಬಾಳಿನ ನಂದಾದೀಪವೇ ಆಗಿದ್ದಾರೆ. ಅವರ ಸ್ಮರಣೆ ಮಾಡುವ ಮೂಲಕ ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದು ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ನುಡಿದರು.
ಅವರು ಪಟ್ಟಣದ ಕದರಗೇರಿ ಓಣಿಯಲ್ಲಿ ಪಂ.ಪುಟ್ಟರಾಜ ಕವಿ ಗವಾಯಿಗಳ ಹಾಗೂ ಮಣಕವಾಡ ಮೃತ್ಯುಂಜಯ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವದ ನಿಮಿತ್ತ ಏರ್ಪಡಿಸಿದ್ದ ನುಡಿ ನಮನ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪುಟ್ಟಯ್ಯಜ್ಜನವರು ಚಿಕ್ಕ ವಯಸ್ಸಿನಲ್ಲಿಯೇ ಶಿಕ್ಷಣಕ್ಕಾಗಿ ಪಂ.ಪಂಚಾಕ್ಷರಿ ಗವಾಯಿಗಳ ಆಶ್ರಮಕ್ಕೆ ಸೇರಿದ ಮೇಲೆ ಅಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠವನ್ನು ಬೆಳೆಸುವ ಕಾರ್ಯ ಮಾಡಿದ್ದರು. ಪಂಡಿತ ಪಂಚಾಕ್ಷರಿ ಗವಾಯಿ ನಾಟಕ ರಂಗಮಂದಿರವನ್ನು ಸಂಘಟಿಸಿ ಸ್ಥಾಪಿಸಿದ ಪುಟ್ಟರಾಜ ಗವಾಯಿಯವರು ನಾಟಕ ಕಂಪನಿಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಸಾವಿರಾರು ರಂಗ ಕಲಾವಿದರನ್ನು ನಾಡಿಗೆ ನೀಡಿದ ಕೀರ್ತಿ ಹೊಂದಿದ್ದಾರೆ. ಗದಗಿನ ವೀರೇಶ್ವರ ಪುಣ್ಯಾಶ್ರಮವು ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ಆಶ್ರಮವಾಗಿದ್ದು, ಇದು ಪುಟ್ಟರಾಜ ಗವಾಯಿಗಳ ಶ್ರಮ ಮತ್ತು ಸಾಧನೆಯ ಪ್ರತೀಕವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಪೂರ್ಣಾಜಿ ಕರಾಟೆ ಮಾತನಾಡಿದರು. ದೇವಪ್ಪ ಮಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಬಸವರಾಜ ಲಕ್ಕುಂಡಿ, ಈರಪ್ಪ ಹಾದಿಮನಿ, ಪುಲಕೇಶಿ ಬಟ್ಟೂರ, ಯಲ್ಲಪ್ಪ ಅಡರಕಟ್ಟಿ, ರಾಮಣ್ಣ ಲಿಂಗಶೆಟ್ಟಿ, ವೈ.ಕೆ. ಲಿಂಗಶೆಟ್ಟಿ, ಮಹಾದೇವಪ್ಪ ಗಿಡಿಬಿಡಿ, ಶಿವಜೋಗೆಪ್ಪ ಚಂದರಗಿ, ಗಂಗಾಧರ ಶಿರಗಣ್ಣವರ, ಪಾರಮ್ಮ ಲಿಂಗಶೆಟ್ಟಿ, ಆನಂದ ಲಿಂಗಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಶಿವರುದ್ರಮ್ಮದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಸೋಮೇಶ ಉಪನಾಳ ನಿರ್ವಹಿಸಿದರು.



