ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ ಧರ್ಮ/ಸಂಸ್ಕೃತಿಯ ಪವಿತ್ರ ಗ್ರಂಥವಾದ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಉಪದೇಶಿಸಿದ ಸತ್ಯ ಸಂದೇಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಲಕ್ಷ್ಮೇಶ್ವರದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ಹೇಳಿದರು.
ಅವರು ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀ ಕೃಷ್ಣನಿಗೆ ಅಭಿಷೇಕ, ತೊಟ್ಟಿಲಲ್ಲಿ ಹಾಕುವ, ಮಡಿಕೆ ಒಡೆಯುವ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ವೇಳೆ ಮಾತನಾಡಿದರು.
ಭಗವದ್ಗೀತೆಯ ಸಂದೇಶದಂತೆ ಪ್ರತಿಯೊಬ್ಬರೂ ತಮ್ಮ ಪಾಲಿನ ಕರ್ತವ್ಯಗಳನ್ನು ಪ್ರತಿಫಲಾಪೇಕ್ಷೆಯಿಲ್ಲದೇ ನಿಭಾಯಿಸಬೇಕು. ಅದಕ್ಕೆ ತಕ್ಕ ಸತ್ಫಲ ಸಿಕ್ಕೇ ಸಿಗುತ್ತದೆ. ಶ್ರೀಕೃಷ್ಣ ಪರಮಾತ್ಮ ಹೇಳಿದಂತೆ ನಮ್ಮ ಪಾಲಿನ ಕರ್ತವ್ಯವನ್ನು ಸತ್ಯ, ಧರ್ಮ, ನಿಷ್ಠೆಯಿಂದ ಮಾಡಬೇಕು. ಶ್ರೀಕೃಷ್ಣ ಪರಮಾತ್ಮನ ಜೀವನ, ಸಂದೇಶ, ಕಾರ್ಯ ಸಾಧಿಸುವ ಪರಿ, ಚಾಣಾಕ್ಷತನ, ಸಮಯ ಪ್ರಜ್ಞೆ ಸದಾ ಅನುಕರಣೀಯ. ಶಾಂತಿ, ನೆಮ್ಮದಿ, ಸಂತೋಷ, ಸ್ಪೂರ್ತಿ, ಕೀರ್ತಿ, ಯಶಸ್ಸಿಗೆ ಪ್ರೇರಕ ಶ್ರೀಕೃಷ್ಣ ಪರಮಾತ್ಮನಾಗಿದ್ದಾನೆ ಎಂದರು.
ಈ ವೇಳೆ ಸೋಮೇಶ್ವರ ದೇವಸ್ಥಾನ ಭಕ್ತರ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ, ದೇವಸ್ಥಾನ ಟ್ರಸ್ಟ್ ನ ಪ್ರೊ. ವಿಕ್ರಂ ಶಿರೋಳ, ಕೋಆರ್ಡಿನೇಟರ್ ಅರುಣ ಕುಮಾರ್ ಜೋಶಿ, ಅರ್ಚಕರಾದ ವರದರಾಜ್ ಒಡವಿ, ಮ್ಯಾನೇಜರ್ ರಮೇಶ ಬಾವಿಕಟ್ಟಿ ಸೇರಿ ಭಕ್ತರು ಇದ್ದರು.