ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯ ಶಾಲೆಗಳಲ್ಲಿ ಬೋಧನಾ ಗುಣಮಟ್ಟ ಸುಧಾರಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರ ಮುಖಾಂತರ ಶಾಲಾ ಪಾಲಕರ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕೊಪ್ಪಳ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ, ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರಾಥಮಿಕ ಶಾಲೆಗಳಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಸಾರ್ವತ್ರಿಕವಾಗಿ ಪ್ರತಿವರ್ಷವೂ ಶೈಕ್ಷಣಿಕ ಬೋಧನಾ ಗುಣಮಟ್ಟ ಕುಸಿಯುತ್ತಾ ಬಂದಿದೆ. ಅದರ ಪರಿಣಾಮ ಪ್ರೌಢಶಾಲೆಯಲ್ಲಿ ಕಾಣುತ್ತಿದೆ. ಕಳಪೆ ಮಟ್ಟದ ಬೋಧನೆ ಮಾಡುತ್ತಿರುವುದರಿಂದ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ನಡೆಸಿದ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 7 ಸಾವಿರಕ್ಕೂ ಕ್ಕೂ ಹೆಚ್ಚು ಆಯಾ ಮಾಧ್ಯಮಗಳಲ್ಲಿ ವಿದ್ಯಾರ್ಥಿಗಳು ಕಲಿತ ಕನ್ನಡ, ಆಂಗ್ಲ ಭಾಷೆ ಓದಲು, ಬರೆಯಲು ಬರುತ್ತಿಲ್ಲ ಎಂಬ ಸಂಗತಿ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ.
ಪ್ರಾಥಮಿಕ ಅಷ್ಟೇ ಅಲ್ಲ, ಪ್ರೌಢಶಾಲೆಗಳ ಪ್ರತಿಯೊಂದು ವರ್ಗದಲ್ಲೂ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಶಿಕ್ಷಕರು ಫಲಕದ ಮೇಲೆ ಬರೆದದ್ದನ್ನು ವೇಗವಾಗಿ ಬರೆದುಕೊಳ್ಳುತ್ತಾರೆ. ಉಳಿದವರು ಬರವಣಿಗೆ ಅಪೂರ್ಣಗೊಳಿಸಿ ಪರೀಕ್ಷೆಯಲ್ಲಿ ಅಷ್ಟಕಷ್ಟೇ ಬರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿಕ್ಷಕರಿಗೆ ಸರ್ಕಾರದ ಅನಿವಾರ್ಯ ಕರ್ತವ್ಯಗಳು ಹೊರತುಪಡಿಸಿ ಅನ್ಯ ಕಾರ್ಯಗಳಿಗೆ ನಿಯೋಜಿಸಬಾರದು. ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಪ್ರತಿಯೊಂದು ಕೊಠಡಿಗಳಲ್ಲಿ, ಕಾರ್ಯಾಲಯ ಮತ್ತು ಆವರಣಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಶಿಕ್ಷಕರಿಗೆ ಶಾಲೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯಗೊಳಿಸಬೇಕು, ಕಲಿಕಾ ಸಮಸ್ಯೆ ಪರಿಹರಿಸಿ ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ಗುಣಮಟ್ಟ ಇದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವಂತಾಗಬೇಕು ಎಂದು ಶಾಲಾ ಪಾಲಕರ ಹೋರಾಟ ಸಮಿತಿ ಸಂಚಾಲಕ ಎಸ್.ಎ. ಗಫಾರ್, ಸಂಘಟನಾ ಸಂಚಾಲಕ ಸುಂಕಪ್ಪ ಮೀಸಿ, ಭ್ರಾತೃತ್ವ ಸಮಿತಿ ಜಿಲ್ಲಾ ಸಹ ಸಂಚಾಲಕ ಚನ್ನಬಸಪ್ಪ ಅಪ್ಪಣ್ಣವರ್, ವಿಮುಕ್ತಿ ವಿದ್ಯಾ ಸಂಸ್ಥೆಯ ಕಾರ್ಯಕರ್ತ ವೀರೇಶ್ ತೆಗ್ಗಿನಮನಿ ಮುಂತಾದವರು ಒತ್ತಾಯಿಸಿದರು.
ಜಿಲ್ಲೆಯ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಕಳಂಕವಾಗಲು ಬೋಧನಾ ವಿಧಾನ ತಿಳಿಯದೆ ಇರುವ ಅನೇಕ ಅನರ್ಹ ಶಿಕ್ಷಕರು ಸಂಪೂರ್ಣ ಹೊಣೆಗಾರರಾಗಿದ್ದು, ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮದ ಶಾಲೆಗಳಾಗಿದ್ದರೂ ಬಹುತೇಕ ವಿದ್ಯಾರ್ಥಿಗಳು ವ್ಯಾಕರಣಬದ್ಧವಾಗಿ ಕನ್ನಡ ಭಾಷೆ, ಆಂಗ್ಲ ಭಾಷೆ ಕಲಿತಿಲ್ಲ. ಆಯಾ ಶಾಲೆಗಳ ಮಕ್ಕಳ ಫಲಿತಾಂಶ ದಾಖಲೆಗಳನ್ನು ಪರಿಶೀಲಿಸಿ ಕಡಿಮೆ ಅಂಕ ಪಡೆದ ವಿಷಯಗಳ ಆಯಾ ಬೋಧಕರನ್ನು ತಕ್ಷಣ ಸೇವೆಯಿಂದ ತೆಗೆದುಹಾಕಿ. ಉನ್ನತ ಅರ್ಹತಾ ಪದವಿಗಳನ್ನು ಪಡೆದ ಮಕ್ಕಳ ಮನೋವಿಜ್ಞಾನ ಓದಿ ತಿಳಿದುಕೊಂಡು ಗುಣಮಟ್ಟದಿಂದ ಬೋಧಿಸುವ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ದೃಢವಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.