ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ
ತಾಲೂಕಿನ ಜೀಗೇರಿ ಗ್ರಾಮದಲ್ಲಿ ಯುವಕರ ಮೇಲೆ ದಾಳಿ ಮಾಡಿದ್ದ ಚಿರತೆ ಶೋಧ ಕಾರ್ಯ ಶುಕ್ರವಾರವೂ ಮುಂದುವರೆಯಿತು.
ಗ್ರಾಮಸ್ಥರ ಜೀವ ಭಯಕ್ಕೆ ಕಾರಣವಾಗಿರುವ ಚಿರತೆಯನ್ನು ಪತ್ತೆ ಹಚ್ಚಿ, ಬೋನಿಗೆ ಕೆಡವಲು ಗಜೇಂದ್ರಗಡ ಆರ್ಎಫ್ಒ ಪ್ರವೀಣಕುಮಾರ ಸಾಸಿವೆಹಳ್ಳಿ ನೇತೃತ್ವದ 10 ಜನರ ತಂಡವು ಜೀಗೇರಿ, ನಾಗೇಂದ್ರಗಡ, ಕಾಲಕಾಲೇಶ್ವರ, ಭೈರಾಪೂರ ಸೇರಿ ವಿವಿಧ ಗ್ರಾಮಗಳಲ್ಲಿ ಕಾರ್ಯಾಚರಣೆ, ಪಹರೆ ನಡೆಸಿ ಚಿರತೆಯ ಪತ್ತೆ ಕಾರ್ಯ ಕೈಗೊಂಡಿದ್ದಾರೆ.
ಜನರ ಓಡಾಟ ಹಾಗೂ ಸಿಬ್ಬಂದಿಯ ಕಾರ್ಯಾಚರಣೆಯ ಕಾವಿನಿಂದ ಚಿರತೆಯು ಸ್ಥಳ ಬದಲಿಸಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆಯು ಜೀಗೇರಿ ಗ್ರಾಮದಲ್ಲಿ 2 ಬೋನುಗಳನ್ನು ಹಾಗೂ ನಾಗೇಂದ್ರಗಡ ಗ್ರಾಮದಲ್ಲಿ 1 ಬೋನು ಇರಿಸಿದ್ದು, ಜೀಗೇರಿ ಸೇರಿ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಚಿರತೆ ಓಡಾಟದ ಬಗ್ಗೆ ಸುಳಿವು ಅಥವಾ ಅನುಮಾನ ವ್ಯಕ್ತವಾದರೆ ಇಲಾಖೆಯ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಸಮೀಪದ ಜೀಗೇರಿ ಗ್ರಾಮದ ಗುಡ್ಡಗಾಡು ಹಾಗೂ ತೋಟಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜನರು ತಿಳಿಸಿದ ಸ್ಥಳಕ್ಕೆ ತೆರಳಿ ಚಿರತೆ ಓಡಾಡಿದ ಗುರುತುಗಳ ಪತ್ತೆಗೆ ಮುಂದಾಗಿದ್ದಾರೆ. ಆದರೆ ಗ್ರಾಮಸ್ಥರು ಚಿರತೆ ಬಂದಿತ್ತು ಎಂಬ ಸ್ಥಳದಲ್ಲಿ ಚಿರತೆಯ ಕುರುಹುಗಳು ಸಿಗದಿರುವುದು ಸಿಬ್ಬಂದಿಗಳಲ್ಲಿ ನಿರಾಶೆ ಮೂಡಿಸುತ್ತಿದೆ.
ಒಟ್ಟಿನಲ್ಲಿ ಆದಷ್ಟು ಬೇಗ ಚಿರತೆ ಸೆರೆ ಹಿಡಿದು ಜನರಲ್ಲಿ ಮೂಡಿರುವ ಭಯ ಹೋಗಲಾಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಬೇಕಿದೆ.