ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಕೋಟೆ ವೀರಭದ್ರೇಶ್ವರ ರಥೋತ್ಸವವವು ಸುರಿಯುತ್ತಿರುವ ಮಳೆಯ ನಡುವೆಯೂ ಸಾವಿರಾರು ಭಕ್ತಾಧಿಗಳ ಮಧ್ಯೆ ಸಂಭ್ರಮದಿಂದ ಜರುಗಿತು.
ದೇವಸ್ಥಾನದಿಂದ ದಾನ ಚಿಂತಾಮಣಿ ಅತ್ತಿಮಬ್ಬೆ ಮಹಾದ್ವಾರದವರೆಗೂ ಸಾಗಿದ ರಥವನ್ನು ಸುರಿಯುತ್ತಿರುವ ಮಳೆಯ ನಡುವೆಯೂ ಯುವಕರು ಭಕ್ತಿ ಭಾವದಿಂದ ಎಳೆದರು. ವೀರಭದ್ರೇಶ್ವರ ನಂದಿಕೋಲ ಮೇಳದ ಯುವಕರು ನಂದಿಕೋಲದ ಜತೆ ಕುಣಿಯುತ್ತಿರುವುದು ಭಕ್ತಿಯನ್ನು ಇಮ್ಮಡಿಸಿತು. ಮಳೆ ನಿಂತ ಮೇಲೆ ಗ್ರಾಮದ ಸಾವಿರಾರು ಭಕ್ತಾಧಿಗಳು ಆಗಮಿಸಿ ಹಣ್ಣು ಮತ್ತು ಉತ್ತತ್ತಿಯನ್ನು ಎಸೆದು ತಮ್ಮ ಸಂಕಲ್ಪವನ್ನು ಸಮರ್ಪಿಸಿದರು.
ರಥೋತ್ಸವಕ್ಕೆ ಡೋಣಿಯ ನಂದಿವೇರಿಮಠದ ಶಿವಕುಮಾರ ಸ್ವಾಮಿಗಳು ಧಾರ್ಮಿಕ ವಿಧಿ ವಿದಾನಗಳೊಂದಿಗೆ ಪೂಜೆ ಸಲ್ಲಿಸಿದ ನಂತರ ಚಾಲನೆ ನೀಡಿದರು. ಗ್ರಾಮದ ಅಲ್ಲಮಪ್ರಭುದೇವರ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ, ಮುದಕಯ್ಯ ಪತ್ರಿಮಠ ಸ್ವಾಮಿಗಳು ಉಪಸ್ಥಿತರಿದ್ದರು. ಬೆಳಿಗ್ಗೆ ವೀರಭದ್ರೇಶ್ವರ ದೇವರಿಗೆ ವಿವಿಧ ಹೂವಿನ ಅಲಂಕಾರ, ರುದ್ರಾಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ನಡೆದವು.