ವಿಜಯಸಾಕ್ಷಿ ಸುದ್ದಿ, ಗದಗ: ಸಪ್ತ ಪರ್ವಗಳ ಸಪ್ತಾಶ್ವವನ್ನು ಏರಿ ಸನ್ಮಾರ್ಗ ಪಥದತ್ತ ಚಲಿಸಿ ಸದ್ಯ 8ನೇ ವರ್ಷದತ್ತ ಹೆಜ್ಜೆಗಳನ್ನು ಊರುತ್ತ ಗದಗ-ಬೆಟಗೇರಿಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದ ಸ್ಟುಡೆಂಟ್ಸ್ ಎಜುಕೇಶನ್ ಸಂಸ್ಥೆಯ ಈ ಗಮನಾರ್ಹ ಉನ್ನತಿಗೆ ಸಹಾಯ, ಸಹಕಾರ, ಪ್ರೋತ್ಸಾಹ ನೀಡುತ್ತಾ ಅಭಿಮಾನದ ಹೊಳೆ ಹರಿಸಿದ ಎಲ್ಲ ವಿದ್ಯಾರ್ಥಿ ವೃಂದ, ಪಾಲಕರು, ಆಡಳಿತ ವರ್ಗ, ಉಪನ್ಯಾಸಕ ಮತ್ತು ಬೋಧಕೇತರ ಸಿಬ್ಬಂದಿಯ ಪ್ರಾಮಾಣಿಕ, ಶ್ರದ್ಧಾಪೂರ್ವಕ ಸೇವಾ ತಾತ್ಪರತೆಯೇ ಕಾರಣ ಎಂದು ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ ಹೇಳಿದರು.
ಸನ್ಮಾರ್ಗ ಕಾಲೇಜಿನ 8ನೇ ವರ್ಷದ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧಕರನ್ನು ಸಮಾಜಕ್ಕೆ ನೀಡುವ, ಆ ಮೂಲಕ ಸಂಸ್ಥೆಯ ಮೂಲ ಉದ್ದೇಶವಾದ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯನ್ನು ಸಾಧಿಸುವ ಆಸೆಯನ್ನು ಸಂಸ್ಥೆ ಹೊಂದಿದೆ ಎಂದರು.
ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಮಾತನಾಡಿ, ಸಂಸ್ಥೆ ಅಥವಾ ವಿದ್ಯಾಲಯ ಅಭಿವೃದ್ಧಿ ಸಾಧಿಸುವಲ್ಲಿ ಆಡಳಿತ ವರ್ಗದ ಜೊತೆಗೆ ಸರ್ವರ ಪ್ರೋತ್ಸಾಹ, ಸಹಕಾರ ಅಗತ್ಯ ಎಂದರು.
ಸಮಾರಂಭದಲ್ಲಿ ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ ಹಾಗೂ ನಿರ್ದೇಶಕ ಪ್ರೊ. ರಾಹುಲ ಒಡೆಯರ್, ಪ್ರೊ. ರೋಹಿತ್ ಒಡೆಯರ್, ಪ್ರೊ. ಪುನೀತ್ ದೇಶಪಾಂಡೆ, ಪ್ರೊ. ಸೈಯ್ಯದ್ ಮತೀನ್ ಮುಲ್ಲಾ ಹಾಗೂ ಕಾಲೇಜಿನ ಸಮಸ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕನ್ನಡ ಭಾಷಾ ಉಪನ್ಯಾಸಕ ಹೇಮಂತ್ ದಳವಾಯಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಪ್ರೊ. ಶಿವಕುಮಾರ ವಜ್ರಬಂಡಿ ವಂದಿಸಿದರು.