ವಿಜಯಸಾಕ್ಷಿ ಸುದ್ದಿ, ತುಮಕೂರು: ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಜೀವನದ ಉನ್ನತಿಗೆ ಸಂಸ್ಕಾರ-ಸನ್ಮಾರ್ಗ ದರ್ಶನದ ಅವಶ್ಯಕತೆಯಿದೆ. ಆತ್ಮ ಸಂಯಮ ಆಧ್ಯಾತ್ಮ ಜ್ಞಾನದ ಅಡಿಪಾಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ನಿಂದ ಸಂಘಟಿಸಿದ ಧನುರ್ಮಾಸದ ಇಷ್ಟಲಿಂಗ ಮಹಾಪೂಜಾ-ಜನ ಜಾಗೃತಿ ಧರ್ಮ ಸಮಾರಂಭದ 2ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭೂಮಿಯಲ್ಲಿ ಬಿತ್ತಿದ ಬೀಜಕ್ಕೆ ನೀರು, ಗೊಬ್ಬರ ಮತ್ತು ರಕ್ಷಣೆ ಎಷ್ಟು ಅವಶ್ಯಕವೋ ಹಾಗೆಯೇ ನೀತಿಗೆ ಧರ್ಮವೂ ಅಷ್ಟೇ ಅವಶ್ಯಕವಾಗಿದೆ. ಸಾತ್ವಿಕ ಮತ್ತು ತಾತ್ವಿಕ ಹಿತಚಿಂತನೆಗಳನ್ನು ಬೋಧಿಸುವುದೇ ಗುರುವಿನ ಧರ್ಮ. ನಡೆದಾಡುವ ದಾರಿಯಲ್ಲಿ ಬಿದ್ದ ಕಲ್ಲು-ಮುಳ್ಳುಗಳನ್ನು ಎತ್ತಿ ಹಾಕುವುದೇ ನಿಜವಾದ ಧರ್ಮ. ಪರಿಶುದ್ಧವಾದ ಮತ್ತು ಪವಿತ್ರವಾದ ಜೀವನ ರೂಪಿಸಿಕೊಳ್ಳುವ ಧರ್ಮ ಪ್ರಜ್ಞೆ ಮತ್ತು ಆಚರಣೆ ಮುಖ್ಯ. ಮೌಲ್ಯಗಳು ಕಣ್ಮರೆಯಾಗುತ್ತಿರುವ ಸಂದಿಗ್ಧ ಸಂದರ್ಭದಲ್ಲಿ ಮತ್ತೆ ಅವುಗಳನ್ನು ಉಳಿಸಿ ಬೆಳೆಸುತ್ತ ಎಲ್ಲರೂ ಶ್ರಮಿಸುವ ಅವಶ್ಯಕತೆಯಿದೆ.
ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಎಷ್ಟು ಮುಖ್ಯವೋ, ಅಷ್ಟೇ ಧರ್ಮವೂ ಮುಖ್ಯವಾಗಿದೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಜಾತಿ, ಮತ, ಪಂಥಗಳನ್ನು ಮೀರಿ ಉದಾತ್ತ ಜೀವನ ಮೌಲ್ಯಗಳನ್ನು ಬೋಧಿಸಿರುವುದನ್ನು ಯಾರೂ ಮರೆಯಬಾರದೆಂದರು.
ಬೆಳ್ಳಾವಿ ಮಠದ ಕಾರದ ವೀರಬಸವ ಸ್ವಾಮಿಗಳು ಮಾತನಾಡಿ, ಬಾಲ್ಯದಲ್ಲಿ ಜ್ಞಾನ ತಾರುಣ್ಯದಲ್ಲಿ ಸಂಪತ್ತು, ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿಕೊಳ್ಳುತ್ತ ಬದುಕಬೇಕಾಗಿದೆ. ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ, ಸಹನೆ, ದಯೆ ವೃದ್ಧಿಗೊಳ್ಳುತ್ತವೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಧನುರ್ಮಾಸದ ಜ್ಞಾನ ಯಜ್ಞದಿಂದ ಭಕ್ತರ ಬಾಳಿಗೆ ಬೆಳಕು ಮೂಡಿ ಬರುವುದೆಂದರು.
ಹೊಳವನಹಳ್ಳಿ ನಂಜುಂಡೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಂಭಾಪುರಿ ಬೆಳಗು ಮಾಸಿಕವನ್ನು ಅ.ಭಾ.ವೀ ಮಹಾಸಭಾದ ನಿರ್ದೇಶಕ ಎನ್. ನಂಜುಂಡೇಶ ಬಿಡುಗಡೆ ಮಾಡಿ ಮಾತನಾಡಿದರು.
ನಂಜುಂಡೇಶ, ಎಸ್.ಪಿ. ಚಿದಾನಂದ, ಕೆ.ಎಸ್. ಸಿದ್ಧಲಿಂಗಪ್ಪ, ಬಿ.ಎಸ್. ಮಂಜುನಾಥ, ಕೆ.ಜಿ. ರುದ್ರಪ್ಪ, ಕೆ.ಎಸ್. ಮಂಜುನಾಥ, ಶೈಲಾ ಶಿವಕುಮಾರ, ಡಾ. ದರ್ಶನ್ ಕೆ.ಎಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮೋಹನಕುಮಾರ ಪಟೇಲ, ಟಿ.ಎಸ್. ಸಿದ್ಧಗಂಗಾ ರುದ್ರೇಶ, ಕವಿತಾ, ಕೆ.ಎನ್. ಗಂಗಣ್ಣ, ಹೆಚ್.ಬಿ.ಎಂ ಹಿರೇಮಠ ಇವರೆಲ್ಲರಿಗೂ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿದ್ದರು. ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ನ ಉಪಾಧ್ಯಕ್ಷ ಕೆ.ಎಸ್. ಉಮೇಶ್ ಕುಮಾರ ಸ್ವಾಗತಿಸಿದರು. ಡಿ.ಆರ್. ಸತೀಶ ನಿರೂಪಿಸಿದರು.
ಧರ್ಮ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ವಿಷಯವಾಗಿ ಬೆಂಗಳೂರಿನ ಎಸ್.ಜೆ.ಆರ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಾ ಸಿದ್ಧರಾಜು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅತ್ಯುನ್ನತ ಗೌರವ ಸ್ಥಾನವನ್ನು ಕೊಟ್ಟಿದ್ದಾರೆ. ಈ ನಾಡಿನ ಸಂಸ್ಕೃತಿ, ಸಭ್ಯತೆ ಮತ್ತು ಆದರ್ಶಗಳನ್ನು ಉಳಿಸಿ-ಬೆಳೆಸಿಕೊಂಡು ಬಂದ ಜವಾಬ್ದಾರಿ ಮಹಿಳೆಯರ ಮೇಲಿದೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಶರಣರು ವಿಶೇಷ ಧರ್ಮಾಚರಣೆಯನ್ನು ಕೊಟ್ಟಿರುವುದನ್ನು ಮರೆಯಲಾಗದೆಂದರು.



