ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಕಳೆದ 57 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಉಚಿತವಾಗಿ ಮಂತ್ರೌಷಧಿಯನ್ನು ವಿತರಿಸುವ ಮೂಲಕ ಲಕ್ಷ್ಮೇಶ್ವರದ ಹೆಸರಿನ ಕೀರ್ತಿಯನ್ನು ದೇಶದ ಉದ್ದಗಲಕ್ಕೂ ಹಬ್ಬುವಂತೆ ಮಾಡಿದ್ದ ದಿ. ಡಾ.ವೈದ್ಯಬಾಬುರಾವ್ ಕುಲಕರ್ಣಿ ಇವರ ಸೇವೆ ಅಪಾರವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಈ ಉಚಿತ ಔಷಧಿ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗಲಾಗುತ್ತಿದ್ದು, ಈ ವರ್ಷದ ಔಷಧಿಗಾಗಿ ಬರುವ ಜನರಿಗೆ ಇಲ್ಲಿ ಅವಶ್ಯವಿರುವ ವ್ಯವಸ್ಥೆಯನ್ನು ಮಾಡುವ ಮೂಲಕ ಎಲ್ಲರೂ ಯಶಸ್ವಿಗೊಳಿಸಬೇಕು ಎಂದು ಹಿರಿಯ ಮುಖಂಡ ಗೋಪಾಲ ಪಡ್ನೀಸ್ ಹೇಳಿದರು.
ಅವರು ದಿ. ವೈದ್ಯ ಬಾಬುರಾವ್ ಕುಲಕರ್ಣಿಯವರ ನಿವಾಸದಲ್ಲಿ 58ನೇ ವರ್ಷದ ಉಚಿತ ಅಸ್ತಮಾ ಮಂತ್ರೌಷಧಿ ವಿತರಣಾ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಈ ಬಾರಿ ಜೂನ್ 8ರಂದು ಮುಂಜಾನೆ 7.11ಕ್ಕೆ ಮೃಗಶಿರಾ ಮಳೆಯ ಪ್ರವೇಶ ಕಾಲದಲ್ಲಿ ಡಾ.ಹರೀಶ ಕುಲಕರ್ಣಿ ಅವರ ನೇತೃತ್ವದಲ್ಲಿ ಅಸ್ತಮಾ ಔಷದಿಯನ್ನು ಬೆಳ್ಳಟ್ಟಿ ರಾಮಲಿಂಗೇಶ್ವರಮಠದ ಶ್ರೀ ಬಸವರಾಜ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಉಚಿತವಾಗಿ ವಿತರಿಸಲಾಗುವದು. ಲಕ್ಷ್ಮೇಶ್ವರ ಸರಕಾರಿ ಪ್ರಾಥಮಿಕ ಶಾಲೆಯ ನಂ.1ರ ಆವರಣದಲ್ಲಿ ಅಸ್ಥಮಾ ಯಜ್ಞ ನಡೆಯಲಿದ್ದು, ಆಗಮಿಸುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವದು ಎಲ್ಲರ ಕರ್ತವ್ಯವಾಗಿದೆ. ಕಾರ್ಯಕ್ರಮವನ್ನು ಸೇವೆಯ ರೂಪದಲ್ಲಿ ಯಶಸ್ವಿಗೊಳಿಸಬೇಕಾಗಿದೆ ಎಂದು ಹೇಳಿದರು.
ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಪಲ್ಲಣ್ಣನವರು ಕುಲಕರ್ಣಿ ವಹಿಸಿದ್ದರು. ಕೃಷ್ಣ ಕುಲಕರ್ಣಿ, ಅನಿಲ ಕುಲಕರ್ಣಿ, ಡಾ. ಹರೀಶ ಕುಲಕರ್ಣಿ, ನಿಂಗಪ್ಪ ತಹಸೀಲ್ದಾರ, ನಿಂಗಪ್ಪ ಗೊರವರ, ಪಾಪಣ್ಣ ಬನ್ನಿ, ಪುಟ್ಟಪ್ಪ ಕೋರಿ, ಬಸಪ್ಪ ನೀಲಪ್ಪನವರ, ನೀಲಪ್ಪ ಬಾಲೇಹೊಸೂರು, ಫಕ್ಕೀರೇಶ, ಗಂಗಾಧರ, ಮುದಕಪ್ಪ ಬನ್ನಿ, ಯಲ್ಲಪ್ಪ ಬನ್ನಿ, ನಿಂಗಪ್ಪ ಕಲ್ಯಾಣಿ ಸೇರಿದಂತೆ ಅನೇಕರಿದ್ದರು.
ವಿರುಪಾಕ್ಷಪ್ಪ ಪಡಗೇರಿ ಮತ್ತು ಎಂ.ಆರ್. ಪಾಟೀಲ ಮಾತನಾಡಿ, ಇಂತಹದೊಂದು ಮಹತ್ವದ ಕಾರ್ಯ ಜರುಗಬೇಕಾದರೆ ಸಮಾಜದ ಸಹಕಾರ ಅತಿ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಬರುವ ಜನರಿಗೆ ಉತ್ತಮವಾಗಿ ವ್ಯವಸ್ಥೆ ಮಾಡುವದಕ್ಕೆ ಇಲ್ಲಿನ ಹಾಲಮತ ಸಮಾಜ ಬಾಂಧವರು ಅನೇಕ ಸಂಘ-ಸಂಸ್ಥೆಗಳು, ಯುವಕರು ಶ್ರಮಿಸುತ್ತಿದ್ದು, ಪುರಸಭೆಯಿಂದ ಅವಶ್ಯಕ ಸೇವೆಗಳನ್ನು ದೊರಕಿಸುವದು, ಬಂದ ಜನರಿಗೆ ಸರಿಯಾಗಿ ಔಷಧಿ ದೊರೆಯುವಂತೆ ಶಿಸ್ತಿನಿಂದ ವ್ಯವಸ್ಥೆ ಮಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವದಾಗಿ ಹೇಳಿದರು.