ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪಿಎಂಶ್ರೀ ಸಹಿಪ್ರಾ ಶಾಲೆ ನಂ.–04ರಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ಹಾಗೂ ಕ.ರಾ.ಸ.ನೌಕರರ ಸಂಘದಿಂದ ಎನ್ಎಂಎಎಸ್ ಪರೀಕ್ಷಾ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರ ಹಾಗೂ ನೋಟ್ಬುಕ್ ವಿತರಣಾ ಕಾರ್ಯಕ್ರಮ ಜರುಗಿತು.
ತಾ.ಪಂ ಇಓ ಕೃಷ್ಣಪ್ಪ ಧರ್ಮರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೌಕರರ ಸಂಘವು 8ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಎನ್ಎಂಎಎಸ್ ಪರೀಕ್ಷಾ ಕಾರ್ಯಾಗಾರವು ಪೂರಕವಾಗಿದೆ. ಮಕ್ಕಳಲ್ಲಿನ ಪ್ರತಿಭೆ ಅನಾವರಣ, ಪ್ರೋತ್ಸಾಹಕ್ಕೆ ಪೂರಕವಾದ ಈ ಪರೀಕ್ಷೆಯಲ್ಲಿ ಹೆಚ್ಚಿನ ಮಕ್ಕಳು ಪಾಲ್ಗೊಳ್ಳುವಂತಾಗಬೇಕು ಎಂದರು.
ನೌಕರರ ಸಂಘದ ಅಧ್ಯಕ್ಷ ಗುರುರಾಜ ಹವಳದ ಮಾತನಾಡಿ, ಎನ್ಎಂಎಎಸ್ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದು ಪರೀಕ್ಷೆಯಲ್ಲಿ ಯಶಸ್ಸು ಕಾಣಲಿ. ಪ್ರಾಮಾಣಿಕ ಪ್ರಯತ್ನ, ಉತ್ತಮ ಮಾರ್ಗದರ್ಶನದಿಂದ ಯಶಸ್ಸು ಸಾಧ್ಯ. ವಿದ್ಯಾಭ್ಯಾಸದಲ್ಲಿ ವಿನಯ, ವಿಧೇಯತೆ ಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗೆ ದಿಕ್ಸೂಚಿಯಾಗಿ ಸರ್ಕಾರ ಇದನ್ನು ಮಾಡುತ್ತಿರುವುದರಿಂದ ಬಡವರ ಮಕ್ಕಳ ಪಾಲಿಗೆ ಆಶಾಕಿರಣವಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಹರ್ಲಾಪೂರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಬಿ. ಸಣ್ಣಮನಿ ವಹಿಸಿದ್ದರು. ನೌಕರರ ಸಂಘದ ಎಂ.ಎ. ನದಾಫ್, ಎಂ.ಡಿ. ವಾರದ, ಡಿ.ಡಿ. ಲಮಾಣಿ, ಎಲ್.ಎನ್. ನಂದೆಣ್ಣವರ, ಎಸ್ಡಿಎಂಸಿ ಅಧ್ಯಕ್ಷ ಶಿವಾನಂದ ಚಕ್ರಸಾಲಿ, ಎಸ್.ಕೆ. ಹವಾಲ್ದಾರ, ಎಂ.ಎಸ್. ಹಿರೇಮಠ, ಜಿ.ಎಸ್. ಗುಡಗೇರಿ, ಎಸ್.ಡಿ. ಲಮಾಣಿ, ಎ.ಎಂ. ಅಕ್ಕಿ, ಬಿ.ಎಂ. ಯರಗುಪ್ಪಿ, ಶ್ರೀಕಾಂತ್ ಬಾಲೆಹೊಸೂರು, ಮಂಜುನಾಥ ಚವ್ಹಾಣ, ಸಂತೋಷ ಗುಂಜಳ ಸೇರಿ ಮಕ್ಕಳು ಭಾಗವಹಿಸಿದ್ದರು.