ಕಾಮಿಡಿ ಕಿಲಾಡಿಗಳು ಸೀಸನ್ -3ರ ವಿನ್ನರ್ ರಾಕೇಶ್ ಪೂಜಾರಿ (34) ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಸ್ನೇಹಿತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕೇಶ್ ಪೂಜಾರಿ ಅವರು ಲೋ ಬಿಪಿಯಿಂದ ಗಿ ಕುಸಿದು ಬಿದ್ದಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮನೆಗೆ ಆಧಾರವಾಗಿದ್ದ ಮಗ ರಾಕೇಶ್ನನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಟ ರಾಕೇಶ್ ಪೂಜಾರಿ ಅವರ ಅಂತಿಮ ದರ್ಶನವನ್ನು ಸ್ನೇಹಿತರು ಪಡೆದುಕೊಂಡಿದ್ದಾರೆ. ನಟಿ ನಯನ, ಸೂರ್ಯ ಕುಂದಾಪುರ, ದೀಕ್ಷಿತ್, ಪ್ರವೀಣ್, ದೀಪಿಕಾ, ವಾಣಿ, ಉಮೇಶ್ ಕಿನ್ಮಾರ, ಸೂರಜ್, ಜೀ ಮೆಂಟರ್ ವಿಜಯ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಗೆಳೆಯನ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸದ್ಯ ವಿಧಿ ವಿಧಾನದಂತೆ ರಾಕೇಶ್ ಪೂಜಾರಿ ಅವರ ಅಂತ್ಯಕ್ರಿಯೆ ನಡೆದಿದೆ.
ಕಾಮಿಡಿ ಕಿಲಾಡಿನಲ್ಲಿ ವಿನ್ನರ್ ಆಗಬೇಕೆಂದು ಹಗಲಿರುಳು ಶ್ರಮಿಸಿದ್ದ ರಾಕೇಶ್ ತುಳುನಾಡಿನ ಕೊರಗಜ್ಜ ದೈವ ದೇವರಿಗೂ ಹರಕೆ ಕಟ್ಟಿಕೊಂಡಿದ್ದರು. ಅಂತೆಯೇ ಕೊರಗಜ್ಜ ದೈವದ ಅನುಗ್ರಹದಿಂದ ಗೆಲುವು ಸಾಧಿಸಿದರು. ನಟ ರಾಕೇಶ್ ಪೂಜಾರಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕ ಏಜೆಯ ಪಿಎ ವಿರೂಪಾಕ್ಷ ಪಾತ್ರದಲ್ಲಿ ನಟಿಸುತ್ತಿದ್ದರು. ಚಿತ್ರರಂಗದಲ್ಲಿ ಏನಾದರು ಸಾಧಿಸಬೇಕು ಎಂಬ ಕನಸು ಕಂಡಿದ್ದ ರಾಕೇಶ್ ಸಾವು ಕಿರುತೆರೆ ಇಂಡಸ್ಟ್ರಿಗೆ ದೊಡ್ಡ ಆಘಾತ ನೀಡಿದೆ.